ಕೋಲಾರ: ರಸ್ತೆ ಅಗಲೀಕರಣಕ್ಕಾಗಿ ವಿಧಾನಸಭೆ ಅಧಿವೇಶನ ಬಹಿಷ್ಕರಿಸಿ ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿ ಮೌನ ಪ್ರತಿಭಟನೆಗೆ ಕೆಜಿಎಫ್ ಶಾಸಕಿ ರೂಪ ಶಶಿಧರ್ ನಿರ್ಧಾರ ಮಾಡಿದ್ದಾರೆ.
ಕೆಜಿಎಫ್ ನಗರದ ರಸ್ತೆ ಕಾಮಗಾರಿ ವಿಳಂಬ ಹಿನ್ನೆಲೆ ಜಿಲ್ಲಾಧಿಕಾರಿ ಹಾಗೂ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಿರುವ ಶಾಸಕಿ ರೂಪ, ತಮ್ಮ ಅಸಾಯಕತೆಯನ್ನ ತೋಡಿಕೊಂಡಿದ್ದಾರೆ.
ಶಾಸಕಿ ರೂಪ ಶಶಿಧರ್ ಸೋಮವಾರದಿಂದ ಆರಂಭವಾಗಲಿರುವ ಅಧಿವೇಶನಕ್ಕೆ ಗೈರಾಗುವ ಮೂಲಕ ಪ್ರತಿಭಟನೆಗೆ ನಿರ್ಧಾರ ಮಾಡಿದ್ದಾರೆ. ಕೆಜಿಎಫ್ ನಗರದ ಅಶೋಕ ರಸ್ತೆಯ ಅಗಲೀಕರಣ ಕಾಮಗಾರಿ ಮಾಡುವಂತೆ ಕೋರ್ಟ್ ಆದೇಶವಿದ್ದರೂ ಸಹ 8 ತಿಂಗಳಿಂದ ಕಾಮಗಾರಿ ಮಾಡದ ವಿಳಂಬ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಕೆಜಿಎಫ್ ನಗರದಲ್ಲಿ ಅಶೋಕ ರಸ್ತೆ ನಿವಾಸಿಗಳೊಂದಿಗೆ ಮಾತನಾಡಿದ ಅವರು, ಹಲವು ಬಾರಿ ನಾನಾ ರೀತಿಯ ಹೋರಾಟಗಳನ್ನು ಮಾಡಿದರೂ ಪರಿಹಾರ ಸಿಕ್ಕಿಲ್ಲ. ಈ ಹಿಂದೆ ಮಳೆಯಲ್ಲೇ ನಿಂತು ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದರು. ರಸ್ತೆ ಅಗಲೀಕರಣಕ್ಕಾಗಿ ರಸ್ತೆಗಿಳಿದು, ನಾನಾ ಹೋರಾಟ ಮಾಡಿದರೂ ವಿಸ್ತರಣೆ ಕಾರ್ಯ ಮಾಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಶಾಸಕಿ ಬೇಸರ ವ್ಯಕ್ತಪಡಿಸಿದ್ದಾರೆ.