ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಪೌರಕಾರ್ಮಿಕ ಆತ್ಮಹತ್ಯೆ- ಅನಾಥವಾದ ಮೂರು ಮಕ್ಕಳು

Public TV
2 Min Read
mnd death

ಮಂಡ್ಯ: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಪೌರಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿದ್ದು, ಮೂವರು ಮಕ್ಕಳು ಅನಾಥವಾಗಿರುವ ಆಘಾತಕಾರಿ ಘಟನೆ ನಡೆದಿದೆ.

ಅಧಿಕಾರಿಗಳ ಕಿರುಕುಳದಿಂದ ಬೇಸತ್ತಿದ್ದ ಪೌರಕಾರ್ಮಿಕನೋರ್ವ ನೇಣಿಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ಸಿದ್ದಾರ್ಥ ನಗರದಲ್ಲಿ ನಡೆದಿದೆ. 35 ವರ್ಷದ ನಾರಾಯಣ್ ಆತ್ಮಹತ್ಯೆಗೆ ಶರಣಾಗಿರುವ ಪೌರಕಾರ್ಮಿಕನಾಗಿದ್ದಾನೆ. ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ತನ್ನ ಸಾವಿಗೆ ಮದ್ದೂರು ಪುರಸಭೆ ಮುಖ್ಯಾಧಿಕಾರಿ ಮುರುಗೇಶ್ ಹಾಗೂ ಹೆಲ್ತ್ ಇನ್‍ಸ್ಪೆಕ್ಟರ್ ಝಾಸಿಂ ಖಾನ್ ಎಂಬುವರೇ ಕಾರಣ ಎಂದು ಬರೆದಿಟ್ಟಿದ್ದಾನೆ. ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Image 2021 02 23 at 3.47.23 PM e1614079596245

ಮೃತ ನಾರಾಯಣ್ ನಿತ್ಯ ಕೆಲಸಕ್ಕೆ ಹೋದರೂ ಹಾಜರಾತಿ ನೀಡದೆ ವೇತನ ಕಡಿತಗೊಳಿಸುತ್ತಿದ್ದರಂತೆ. ಅಲ್ಲದೆ ಆರೋಗ್ಯದಲ್ಲಿ ಏರುಪೇರಾದರೂ ಬಿಡದೆ ಕಸ ಲೋಡ್ ಮಾಡುವ ಕೆಲಸ ಹಾಗೂ ಚರಂಡಿ, ಮ್ಯಾನ್ ಹೋಲ್‍ಗಳ ಸ್ವಚ್ಛಗೊಳಿಸುವಂತಹ ಕೆಲಸ ನೀಡುತ್ತಿದ್ದರು. ಕಳೆದ ನಾಲ್ಕು ತಿಂಗಳ ಹಿಂದೆ ನಾರಾಯಣ್, ಮ್ಯಾನ್ ಹೋಲ್ ಗೆ ಇಳಿದು ಸ್ವಚ್ಛ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿತ್ತು. ಯಾವುದೇ ಸುರಕ್ಷತಾ ಸಲಕರಣೆ ನೀಡದೇ ಬರಿಕೈಯಲ್ಲಿ ಮ್ಯಾನ್ ಹೋಲ್ ಸ್ವಚ್ಛ ಮಾಡಿಸಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿಬಂದಿತ್ತು. ಈ ಪ್ರಕರಣವಾದ ಬಳಿಕ ನಾರಾಯಣ್‍ಗೆ ಅಧಿಕಾರಿಗಳು ನೀಡುತ್ತಿದ್ದ ಕಿರುಕುಳ ಮತ್ತಷ್ಟು ಹೆಚ್ಚಾಗಿತ್ತಂತೆ.

ಪೌರಕಾರ್ಮಿಕನ ಪತ್ನಿ ಮೂರು ಮಕ್ಕಳನ್ನು ಹೆತ್ತು ಅನಾರೋಗ್ಯದಿಂದ ಮೃತಪಟ್ಟಿದ್ದಳು. ಬಳಿಕ ಮೂರು ಪುಟ್ಟ ಕಂದಮ್ಮಗಳ ಜವಾಬ್ದಾರಿ ಹೊತ್ತಿದ್ದವನಿಗೆ ಮೇಲಧಿಕಾರಿಗಳ ಕಿರುಕುಳ ಹೆಚ್ಚಾಗುತ್ತಲೇ ಹೋಗಿತ್ತು. ಎಷ್ಟೇ ಬೇಡಿಕೊಂಡರೂ ಕಿರುಕುಳ ನಿಲ್ಲಿಸದ ಅಧಿಕಾರಿಗಳು ತಮ್ಮ ದರ್ಪ ಮುಂದುವರೆಸಿದ್ದರು. ಕೊನೆಗೆ ಇದರಿಂದ ಬೇಸತ್ತ ಪೌರಕಾರ್ಮಿಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದೀಗ ಮೂರು ಮಕ್ಕಳು ಅಪ್ಪ-ಅಮ್ಮನನ್ನು ಕಳೆದುಕೊಂಡು ಅನಾಥವಾಗಿ ಬೀದಿಗೆ ಬಿದ್ದಿವೆ.

Police Jeep 1 1

ನಾರಾಯಣ್ 13 ವರ್ಷಗಳ ಹಿಂದೆ ಅರುಣ ಅವರನ್ನು ವಿವಾಹವಾಗಿ, ಮೂರು ಮಕ್ಕಳೊಂದಿಗೆ ಸಂತೋಷವಾಗಿ ಜೀವನ ನಡೆಸುತ್ತಿದ್ದರು. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ಆತನ ಪತ್ನಿ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದಳು. ಬಳಿಕ ಮಕ್ಕಳ ಜವಾಬ್ದಾರಿ ಹೊತ್ತಿದ್ದ ನಾರಾಯಣ್, ಅಧಿಕಾರಿಗಳ ಕಿರುಕುಳ ಸಹಿಸಿಕೊಂಡೇ ಕೆಲಸ ಮಾಡ್ತಿದ್ದರು. ಐದು ದಿನದ ಹಿಂದೆಷ್ಟೇ ಕೋವಿಡ್ ವ್ಯಾಕ್ಸಿನ್ ತೆಗೆದುಕೊಂಡಿದ್ದ ವೆಂಕಟೇಶ್, ಜ್ವರದಿಂದ ಎರಡು ದಿನ ಕೆಲಸಕ್ಕೆ ಹೋಗಿರಲಿಲ್ಲ. ನಿನ್ನೆ ಕೆಸಲಕ್ಕೆ ಹಾಜರಾಗಲು ಹೋದಾಗ ಯಾಕೆ ಬಂದಿದ್ದೀಯಾ ಎಂದು ಅಧಿಕಾರಿಗಳು ವಾಪಸ್ ಕಳುಹಿಸಿದ್ದಾರೆ. ಅಲ್ಲದೆ ನಿನ್ನನ್ನ ಕೆಲಸದಿಂದ ತೆಗೆಯುತ್ತೇವೆ ಎಂದು ಅಧಿಕಾರಿಗಳು ಹೆದರಿಸುತ್ತಿದ್ದರು ಎಂದು ಸ್ನೇಹಿತರೊಂದಿಗೂ ವೆಂಕಟೇಶ್ ಹೇಳಿಕೊಂಡಿದ್ದರು.

ನಾರಾಯಣ್ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ಪುರಸಭೆ ಮುಖ್ಯಾಧಿಕಾರಿ ಮುಗರುಗೇಶ್, ಆತನಿಗೆ ನಾವು ಕಿರುಕುಳ ನೀಡಿಲ್ಲ. ಮ್ಯಾನ್ ಹೋಲ್ ಗೆ ಇಳಿಯುವಂತೆ ಕೂಡ ಹೇಳಿರಲಿಲ್ಲ. ಇದೊಂದು ಸುಳ್ಳು ಪ್ರಕರಣ ಎಂದು ಡಿಸಿ ವರದಿ ನೀಡಿದ್ದಾರೆ. ಕುಡಿದು ಮಲಗಿದ್ದಾಗ ಯಾರೋ ಕರೆದುಕೊಂಡು ಇಳಿಸಿದ್ದಾರೆಂದು ಆತನೇ ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ.

Police Jeep

ಪುರಸಭೆ ಮುಖ್ಯಾಧಿಕಾರಿ ದರ್ಪ ಹಾಗೂ ಕಿರುಕುಳದ ಬಗ್ಗೆ ಕೆಲವು ಪೌರಕಾರ್ಮಿಕರು ಕೂಡ ಆರೋಪ ಮಾಡುತ್ತಿದ್ದಾರೆ. ಏನೇ ಆಗಲಿ ಮೊದಲೇ ತಾಯಿ ಕಳೆದುಕೊಂಡು ತಬ್ಬಲಿಗಳಾಗಿದ್ದ ಮೂರು ಮಕ್ಕಳು ಇದೀಗ ತಂದೆ ಕಳೆದುಕೊಂಡು ಅನಾಥವಾಗಿವೆ.

Share This Article
Leave a Comment

Leave a Reply

Your email address will not be published. Required fields are marked *