ಹಾವೇರಿ: ದನ ಮೇಯಿಸಲು ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಇಬ್ಬರು ಕಾಮುಕರನ್ನ ಎಮ್ಮೆ ಅಟ್ಟಿಸಿಕೊಂಡು ಹೋಗುವ ಮೂಲಕ ಮಹಿಳೆಯನ್ನ ಪಾರು ಮಾಡಿದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹಿರೇಮರಳಿಹಳ್ಳಿ ಗ್ರಾಮದ ಜಮೀನಿನಲ್ಲಿ ನಡೆದಿದೆ.
ಆರೋಪಿಗಳನ್ನ ಹಿರೇಮರಳಿಹಳ್ಳಿ ಗ್ರಾಮದ ಬಸವರಾಜ ಗಾಳೆಪ್ಪ ದಂಡಿನ್ ಹಾಗೂ ಪರಶುರಾಮ ತಮ್ಮಣ್ಣ ಹಟ್ಟಿ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಹಿರೇಮರಳಿಹಳ್ಳಿ ಗ್ರಾಮದ ತಮ್ಮ ಜಮೀನಿನ ಬದುವಿನ ಹತ್ತಿರವಿರುವ ನೀಲಗಿರಿ ತೋಪಿನಲ್ಲಿ ದನ ಮೇಯಿಸುತ್ತಿದ್ದಾಗ ದಂಡಿನ್ ಅಸಭ್ಯವಾಗಿ ವರ್ತಿಸಿದ್ದಾನೆ.
ಈತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಮಹಿಳೆಗೆ ಇನ್ನೋರ್ವ ಆರೋಪಿ ಪರಶುರಾಮ ಹಟ್ಟಿ ಎದುರಿನಿಂದ ಬಂದು ಹಲ್ಲೆ ನಡೆಸಿದ್ದಾನೆ. ಅಲ್ಲದೆ ಪ್ರತಿರೋಧ ಒಡ್ಡಿದ ಮಹಿಳೆಯ ಕತ್ತನ್ನು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ. ಮಹಿಳೆ ಚೀರಾಡುತ್ತಿರುವುದನ್ನು ಗಮನಿಸಿದ ಎಮ್ಮೆ ತನ್ನ ಪೋಷಕಿ ಸಂಕಷ್ಟದಲ್ಲಿದ್ದಾಳೆ ಓಡಿಬಂದು ಆರೋಪಿಯಲ್ಲೊಬ್ಬನನ್ನು ಅಟ್ಟಿಸಿಕೊಂಡು ಹೋಗಿದೆ.
ಮಹಿಳೆ ಇನ್ನೋರ್ವನಿಂದ ತಪ್ಪಿಸಿಕೊಂಡು ಓಡಿಹೋಗುವ ಸಂದರ್ಭದಲ್ಲಿ ಎಮ್ಮೆ ಇಬ್ಬರು ಆರೋಪಿಗಳ ಬೆನ್ನಟ್ಟಿ ಹೋಗಿದೆ. ಪ್ರಾಣಾಪಾಯದಿಂದ ಪಾರಾಗಿ ಬಂದ ಮಹಿಳೆ ಗ್ರಾಮದ ಹಿರಿಯರಿಗೆ ಘಟನೆಯನ್ನು ವಿವರಿಸಿದ್ದಾಳೆ. ಪ್ರಕರಣವು ಸವಣೂರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿ ಪರಶುರಾಮ ಹಟ್ಟಿಯನ್ನು ಪೋಲಿಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆನ್ನಲಾಗಿದೆ. ಇದನ್ನೂ ಓದಿ: ಯತ್ನಾಳ್ ಪರ ಸದಾ ಕಾಲ ಇರುತ್ತೇನೆ: ಸಿ.ಪಿ ಯೋಗೇಶ್ವರ್
ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.