ಉಡುಪಿ: ಬಿಜೆಪಿ ಸೇರಿರುವ ಮಾಜಿ ಐಪಿಎಸ್ ಅಣ್ಣಾಮಲೈ ತಮಿಳುನಾಡಿನ ಅಣ್ಣ ಆಗಿ ಮೂಡಿಬರಲಿ ಎಂದು ಸರ್ಕಾರದ ಮುಖ್ಯ ಸಚೇತಕ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.
ದೆಹಲಿಯಲ್ಲಿ ಅಣ್ಣಾಮಲೈ ಬಿಜೆಪಿ ಸೇರ್ಪಡೆ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣ್ಣಾಮಲೈ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದವರು. ಕಾರ್ಕಳದ ಖಡಕ್ ಎಸ್ಪಿಯಾಗಿ ಅಣ್ಣಾಮಲೈ ಕರ್ತವ್ಯ ಆರಂಭಿಸಿದವರು. ಎಸ್ಪಿಯಾಗಿ ಜನಮನ್ನಣೆ ಪಡೆದವರು. ಅಣ್ಣಾಮಲೈ ಬಿಜೆಪಿ ಸೇರಿದ್ದು ಬಹಳ ಸಂತೋಷವಾಗಿದೆ ಎಂದರು.
ಅಣ್ಣಾಮಲೈ ಕರ್ತವ್ಯದಲ್ಲಿ ಇದ್ದಾಗಲೇ ಜನಪರ ಯೋಚನೆ ಮಾಡಿದ ವ್ಯಕ್ತಿ. ಅವರ ಯೋಜನೆಗಳು ಮುಂದೆ ಜನಪರವಾಗಿಯೇ ಇರುತ್ತದೆ. ಅಣ್ಣಾಮಲೈ ರಾಜಕೀಯ ಜೀವನ ಉಜ್ವಲವಾಗಲಿ. ತಮಿಳುನಾಡಿನಲ್ಲಿ ಬಿಜೆಪಿ ಬೇರು ಗಟ್ಟಿಯಾಗಲಿ. ಅಣ್ಣಾಮಲೈಯವರು ತಮಿಳುನಾಡಿನ ಅಣ್ಣ ಅಗಿ ಮೂಡಿಬರಲಿ ಎಂದು ಹಾರೈಸಿದರು.
ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಮಂಗಳವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರುಳೀಧರ್ ರಾವ್ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಮುರುಗನ್ ಅವರ ನೇತೃತ್ವದಲ್ಲಿ ಅಣ್ಣಾಮಲೈ ಅವರು ಬಿಜೆಪಿ ಸೇರ್ಪಡೆಯಾಗಿದ್ದು, ಪಕ್ಷದ ಸದಸ್ಯತ್ವ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತ ಕೋರಿದ್ದರು.
ಈ ವೇಳೆ ಮಾತನಾಡಿದ್ದ ಅಣ್ಣಾಮಲೈ, ನಾನು ಸಾಮಾನ್ಯ ಕಾರ್ಯಕರ್ತನಂತೆ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ನನಗಿಂತ ಮುನ್ನ ಸಾವಿರಾರು ಕಾರ್ಯಕರ್ತರು ಪಕ್ಷಕ್ಕಾಗಿ ಕೆಲಸ ಮಾಡಿದ್ದು, ನಾನು ಪಕ್ಷದಲ್ಲಿ ಏನನ್ನೂ ನಿರೀಕ್ಷೆ ಮಾಡದೆ ಸೇರ್ಪಡೆಯಾಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು.