ಬೆಂಗಳೂರು: ನಟ ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ಬಹಳ ಆತ್ಮೀಯವಾಗಿದ್ದರು. ಆದರೆ ಅಣ್ಣನ ಹಠಾತ್ ಸಾವಿನಿಂದ ನೊಂದಿರುವ ಧ್ರುವ ಸೋಷಿಯಲ್ ಮೀಡಿಯಾದಲ್ಲಿ ಅಣ್ಣನನ್ನು ನೆನೆದು ಭಾವುಕರಾಗಿದ್ದರು. ಇದೀಗ ಪ್ರೀತಿಯ ಅಣ್ಣನಿಗಾಗಿ ಮಂಟಪವನ್ನು ಕಟ್ಟಿಸಿದ್ದಾರೆ.
ಚಿರಂಜೀವಿ ಸರ್ಜಾ ಅವರನ್ನು ರಾಮನಗರ ಬಳಿಯ ಬೃಂದಾವನ ಫಾರ್ಮ್ ಹೌಸ್ನಲ್ಲಿ ಮಣ್ಣು ಮಾಡಲಾಗಿದೆ. ಈ ಫಾರ್ಮ್ ಹೌಸ್ ಧ್ರುವ ಸರ್ಜಾ ಅವರಿಗೆ ಸೇರಿದ್ದು, ಆದರೆ ಫಾರ್ಮ್ ಹೌಸ್ ಚಿರುಗೆ ತುಂಬಾ ಇಷ್ಟವಾಗಿತ್ತಂತೆ. ‘ಅಣ್ಣ ಸದಾ ನನ್ನ ಜೊತೆಗಿರಬೇಕು, ನನ್ನ ಫಾರ್ಮ್ ಹೌಸ್ನಲ್ಲೇ ಅಣ್ಣನ ಅಂತ್ಯಕ್ರಿಯೆಯಾಗಲಿ’ ಎಂದು ಸಹೋದರ ಧ್ರುವ ಸರ್ಜಾ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಫಾರ್ಮ್ ಹೌಸ್ನಲ್ಲಿ ಚಿರು ಅಂತ್ಯಕ್ರಿಯೆ ಮಾಡಲಾಗಿದೆ.
ಇದೀಗ ಧ್ರುವ ಸರ್ಜಾ ಅಣ್ಣನ ಪುಣ್ಯ ಭೂಮಿಗೆ ಬಿಸಿಲು ತಾಗಬಾರದೆಂದು ಮಂಟಪ ಕಟ್ಟಿಸಿದ್ದಾರೆ. ಚಿರು ಕುಟುಂಬದ ಸಂಬಂಧಿಕರಾದ ಮಂಜು ಈ ಮಂಟಪ ಕಟ್ಟಿದ್ದಾರೆ. ಅಷ್ಟೇ ಅಲ್ಲದೇ ಚಿರು ಸರ್ಜಾ ಸಮಾಧಿ ಸ್ಥಳದಲ್ಲಿ ದೊಡ್ಡದಾದ ಮಂಟಪವನ್ನು ಧ್ರುವ ಕಟ್ಟಿಸಲಿದ್ದಾರಂತೆ. ಮಂಟಪದ ಕಾರ್ಯ ಕೂಡ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ ಎನ್ನಲಾಗಿದೆ.
ಬಿಸಿಲು ಬಂದರೆ ಅಣ್ಣನ ಪುಣ್ಯ ಭೂಮಿಗೆ ಬಿಸಿಲು ತಾಗಬಾರದೆಂದು ಧ್ರುವ ಅವರು ಮುಂದೆ ನಿಂತು ಈ ಮಂಟಪ ಕಟ್ಟಿಸಿದ್ದಾರೆ ಎಂದು ಮಂಜು ನೋವಿನಿಂದ ಹೇಳಿದ್ದಾರೆ.
ಅಣ್ಣನನ್ನು ಕಳೆದುಕೊಂಡು ಐದು ದಿನಗಳ ಬಳಿಕ ಧ್ರುವ ಸರ್ಜಾ ಇನ್ಸ್ಟಾಗ್ರಾಂನಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದರು. ಚಿರಂಜೀವಿ ಸರ್ಜಾ ಸಾವಿಗೂ ಒಂದು ದಿನ ಮುನ್ನ ಶೇರ್ ಮಾಡಿಕೊಂಡಿದ್ದ ಫೋಟೋ ನೋಡಿ ನೋವನ್ನು ತೋಡಿಕೊಂಡಿದ್ದಾರೆ. “ನೀನು ನನಗೆ ವಾಪಸ್ ಬೇಕು. ನೀ ಇರದೆ ನನಗೆ ಇರಲು ಸಾಧ್ಯವಾಗುತ್ತಿಲ್ಲ” ಎಂದು ಧ್ರುವ ಸರ್ಜಾ ನೋವಿನ ನುಡಿಗಳನ್ನು ಸ್ಟೇಟಸ್ನಲ್ಲಿ ಬರೆದುಕೊಂಡಿದ್ದರು.