ವಿಜಯಪುರ: ಅಣೆಕಟ್ಟು ದಾಟುತ್ತಿದ್ದ ಯುವಕ ಬೈಕ್ ಸಮೇತ ಭೀಮಾ ನದಿ ಪಾಲಾಗಿರುವ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿಯಲ್ಲಿ ನಡೆದಿದೆ. ಕಳೆದ ಬುಧವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತುಂಬಿ ಹರಿಯುತ್ತಿದ್ದ ಭೀಮಾ ನದಿಯ ಉಮರಾಣಿ-ಲವಗಿ ಬ್ಯಾರೇಜ್ನಲ್ಲಿ (ಅಣೆಕಟ್ಟು) ಈ ಘಟನೆ ನಡೆದಿದೆ. ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ಯುವಕ ರಮೇಶ್ ದುಂಡಪ್ಪ ಬಸರಗಿ (25) ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ತಂದೆ ದುಂಡಪ್ಪ ಬಸರಗಿ ಜೊತೆ ಸಂಬಂಧಿಕರ ಅಂತ್ಯಕ್ರಿಯೆಗೆ ಮಹಾರಾಷ್ಟ್ರಕ್ಕೆ ರಮೇಶ್ ಹೋಗಿದ್ದನು. ಮಹಾರಾಷ್ಟ್ರದಿಂದ ವಾಪಸ್ ಬರುವಾಗ ಈ ಘಟನೆ ನಡೆದಿದೆ. ಭೀಮಾ ನದಿ ತುಂಬಿ ಹರಿಯುತ್ತಿದ್ದರಿಂದ ನಡೆದುಕೊಂಡು ತಂದೆ ಅಣೆಕಟ್ಟು ದಾಟಿದ್ದಾರೆ. ಆದರೆ ಮಗ ಬೈಕ್ನಲ್ಲಿ ಬ್ಯಾರೇಜ್ ದಾಟುವಾಗ ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿದ್ದಾನೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ. ಇದುವರೆಗೂ ಯುವಕ ಪತ್ತೆಯಾಗಿಲ್ಲ.
ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಚಡಚಣ ತಹಶೀಲ್ದಾರ್ ಆರ್.ಎಸ್.ರೇವಡಿಗಾರ, ಪಿಎಸ್ಐ ಎಂ.ಎ.ಸತೀಗೌಡರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಬೋಟ್, ಜೀವ ರಕ್ಷಕ ಉಪಕರಣಗಳ ಕೊರತೆ ನೆಪ ಹೇಳಿ ಯುವಕನ ಪತ್ತೆಗೆ ತಾಲೂಕಾಡಳಿತ ಮುಂದಾಗುತ್ತಿಲ್ಲ ಅಂತ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಸದ್ಯ ಚಡಚಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.