– ಯಾರ ಮೇಲೂ ಪ್ರೀತಿ ಇಲ್ಲ, ದ್ವೇಷವೂ ಇಲ್ಲ
– ನನಗೆ ಯಾರೂ ಮಿತ್ರರಿಲ್ಲ
ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರು ಸನ್ಯಾಸಿಯಲ್ಲ, ಅವರು ಮುಖ್ಯಮಂತ್ರಿಯಾಗಲು ಏನು ಬೇಕೋ ಅದನ್ನು ಮಾಡುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಕುಗ್ಗಿಸಲು ಅವರ ತಮ್ಮನಿಂದ ಏನು ರಾಜಕೀಯ ಮಾಡುತ್ತಿದ್ದಾರೆ ಎಂಬುದು ತಿಳಿದಿದೆ. ನನ್ನನ್ನು ಮುಗಿಸಲು ಯಾವ ರೀತಿಯ ರಾಜಕೀಯ ಮಾಡುತ್ತಿದ್ದಾರೆ ಎಂಬುದು ಸಹ ತಿಳಿದಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಡಿಕೆಶಿ ವಿರುದ್ಧ ಹರಿಹಾಯ್ದಿದ್ದಾರೆ.
ಸಿ.ಪಿ.ಯೋಗೆಶ್ವರ್ ಅವರ ಹೇಳಿಕೆ ಕುರಿತು ಮಾತನಾಡಿದ ಅವರು, ಮಂಡ್ಯ ಚುನಾವಣೆಯಲ್ಲಿ ಜೋಡೆತ್ತು ಎಂದು ಭಾಷಣ ಮಾಡಿದ್ದು ಬೇರೆ. ಮಂಡ್ಯದಲ್ಲಿ ಜೆಡಿಎಸ್ಗೆ ಕಾಂಗ್ರೆಸ್ನ ಯಾವುದೇ ನಾಯಕರು ಬೆಂಬಲ ನೀಡಲಿಲ್ಲ. ಮಂಡ್ಯದಲ್ಲೂ ಬಿಜೆಪಿ, ಕಾಂಗ್ರೆಸ್, ರೈತ ಸಂಘ ಸೇರಿಯೇ ನನ್ನನ್ನು ಮುಗಿಸಲು ಯತ್ನಿಸಿದರು. ಅಲ್ಲದೆ ತುಮಕೂರಿನಲ್ಲಿ ಸಹ ಕಾಂಗ್ರೆಸ್- ಬಿಜೆಪಿ ಸೇರಿಯೇ ದೇವೇಗೌಡರನ್ನು ಸೋಲಿಸಿದರು. ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ನಾವು ಹೋಗಿರಲಿಲ್ಲ. ಇದೆಲ್ಲ ಆಗಿದ್ದು ಕಾಂಗ್ರೆಸ್ ಹೈ ಕಮಾಂಡ್ನಿಂದ ಎಂದು ಆರೋಪಿಸಿದ್ದಾರೆ.
ನೇರವಾಗಿ ಸರ್ಕಾರ ತೆಗೆದಿದ್ದು ಬಿಜೆಪಿಯಾದರೂ ಸರ್ಕಾರದಲ್ಲಿ ಇದಕ್ಕೆ ಆರಂಭದಿಂದಲೂ ಪ್ರೇರೇಪಣೆ ನೀಡಿದ್ದು ಕಾಂಗ್ರೆಸ್ನವರು. ಹೀಗಾಗಿ ಇಬ್ಬರೂ ನನಗೆ ಶತ್ರುಗಳೇ, ಇಬ್ಬರ ವಿರುದ್ಧವೂ ನಾನು ಹೋರಾಟ ಮಾಡಬೇಕಿದೆ. ನಾನು ಅಡ್ಜೆಸ್ಟ್ ಮೆಂಟ್ ರಾಜಕೀಯ ಮಾಡುತ್ತಿಲ್ಲ. ಇದರಿಂದ ನನಗೆನೂ ಆಗಬೇಕಾಗೂ ಇಲ್ಲ ಸ್ಪಷ್ಟಪಡಿಸಿದ್ದಾರೆ.
ನಾನು ವರ್ಗಾವಣೆ ದಂಧೆಯಲ್ಲಿ ತೊಡಗಿಲ್ಲ. ಸರ್ಕಾರದಲ್ಲಿ ಈ ಕರಿತು ಯಾವುದನ್ನೂ ಕೇಳಿಲ್ಲ. ಅಧಿಕಾರಿಗಳನ್ನಿಟ್ಟುಕೊಂಡು ರಾಜಕೀಯ ಮಾಡುವಂತಹ ದೈನೇಸಿ ಪರಿಸ್ಥಿತಿ ನನಗೆ ಬಂದಿಲ್ಲ ಎಂದರು. ಇದನ್ನೂ ಓದಿ: ಬಿಜೆಪಿ ಬಗ್ಗೆ ಎಚ್ಡಿಕೆ ಸಾಫ್ಟ್ ಕಾರ್ನರ್ ಹೊಂದಿರುವುದು ಸತ್ಯ: ಬಸವರಾಜ್ ಹೊರಟ್ಟಿ
ಬೆಳಗಾವಿ ರಾಜಕಾರಣದಿಂದಲೇ ಸರ್ಕಾರ ಉರುಳಿತು. ಇದಕ್ಕೇ ಕಾರಣವೇ ಡಿ.ಕೆ.ಶಿವಕುಮಾರ್ ಎಂದು ಎಚ್ಡಿಕೆ ಹರಿಹಾಯ್ದಿದ್ದಾರೆ. ಈಗ ನನಗೆ ಯಾರೂ ಮಿತ್ರರಿಲ್ಲ ಎಂದು ಹೇಳುವ ಮೂಲಕ ಡಿಕೆಶಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ಕೋವಿಡ್-19 ಪರಿಸ್ಥಿತಿಯಲ್ಲಿ ಸರ್ಕಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ. ಮುಂದೆ ಈ ಕುರಿತು ಚರ್ಚೆ ನಡೆಸೋಣ. ಜನರ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕಿದೆ. ಟೀಕೆ ಮಾಡಿದ ತಕ್ಷಣ ಏನೂ ಬದಲಾಗುವುದಿಲ್ಲ. ಹೀಗಾಗಿ ಈ ಕುರಿತು ಸಮಯ ಬಂದಾಗ ಚರ್ಚಿಸಬೇಕಿದೆ ಎಂದರು.
ನಮ್ಮ ಪಕ್ಷದ ಕಾರ್ಯಕರ್ತರನ್ನು ಡಿಕೆಶಿ ಸೆಳೆಯುತ್ತಿದ್ದಾರೆ. ಅಲ್ಲದೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ರಾಮನಗರದ ಜನತೆಗೂ ನನಗೂ ಇರುವ ಬಾಂಧವ್ಯವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಎಲ್ಲರಿಗೂ ನಾನೇ ಟಾರ್ಗೆಟ್. ಜೆಡಿಎಸ್ ಪಕ್ಷ ಮುಗಿಸಿದರೆ ಎರಡು ರಾಷ್ಟ್ರೀಯ ಪಕ್ಷಗಳು ಮಾತ್ರ ಉಳಿಯುತ್ತವೆ. ಹೀಗಾಗಿ ಜೆಡಿಎಸ್ ಮುಗಿಸಲು ನೋಡುತ್ತಿದ್ದಾರೆ. ಡಿಕೆಶಿ ಟ್ರಬಲ್ ಶೂಟರ್ ಎಂದು ಪ್ರಚಾರ ಪಡೆದರು, ಯಾವ ರೀತಿಯ ಟ್ರಬಲ್ ಶೂಟರ್ ಎಂಬುದು ಗೊತ್ತಿದೆ. ಪ್ರತಿಯೊಬ್ಬರೂ ಅವರ ಅನುಕೂಲಕ್ಕೆ ರಾಜಕಾರಣ ನಡೆಸುತ್ತಾರೆ ಎಂದು ಎಚ್ಡಿಕೆ ಮಾರ್ಮಿಕವಾಗಿ ನುಡಿದಿದ್ದಾರೆ.