ಚಿಕ್ಕಮಗಳೂರು: ರಸ್ತೆ ಬದಿ ಹಾಕಿದ್ದ ಅಡಿಕೆ ಸಿಪ್ಪೆಗೆ ಆಕಸ್ಮಿಕ ಬೆಂಕಿ ತಗುಲಿದ ಗ್ರಾಮದ ತುಂಬಾ ಹೊಗೆ ಆವರಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದೆ.
ಮಲೆನಾಡ ಹೆಬ್ಬಾಗಿಲು ಎಂದೇ ಕರೆಯುವ ತರೀಕೆರೆ ತಾಲೂಕಿನ ಬಹುತೇಕ ಭಾಗ ಅಡಿಕೆ ಉದ್ಯಮವನ್ನೇ ಆಶ್ರಯಿಸಿದೆ. ಈಗ ಅಡಿಕೆ ಕೊಯ್ಲಿನ ಸಮಯ ಮುಗಿದಿದೆ. ಸುಲಿದ ಅಡಿಕೆಯ ಸಿಪ್ಪೆಯನ್ನ ಒಣಗಲೆಂದು ಕೆಲವರು ರಸ್ತೆ ಬದಿ ಸುರಿಯುತ್ತಾರೆ. ಹೀಗೆ ಸುರಿದ ಅಡಿಕೆ ಸಿಪ್ಪೆಗೆ ಆಕಸ್ಮಿಕ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ.
ಅಡಿಕೆ ಸಿಪ್ಪೆ ಜೋರಾಗಿ ಹೊತ್ತಿ ಉರಿಯದಿದ್ದರೂ ಬಾವಿಕೆರೆ ಗ್ರಾಮದ ತುಂಬಾ ಹೊಗೆ ಆವರಿಸಿದೆ. ಇದರಿಂದ ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ. ಗ್ರಾಮದಲ್ಲಿ ಅಕ್ಕಪಕ್ಕ ನಿಂತಿದ್ದವರೂ ಕಾಣದಂತೆ ಆಗಿದ್ದು, ಹೊಗೆಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಕೂಡ ಹರಸಾಹಸ ಪಟ್ಟಿದ್ದಾರೆ.
ಈ ಮಧ್ಯೆ ಸ್ಥಳಿಯರು ಕೂಡ ರಸ್ತೆ ಬದಿ ಅಡಿಕೆ ಸಿಪ್ಪೆಯನ್ನು ಸುರಿಯುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ಬದಿ ಅಡಿಕೆ ಸಿಪ್ಪೆ ಸುರಿಯಲು ಬಿಡಬಾರದು ಎಂದು ಸ್ಥಳೀಯ ಆಡಳಿತಕ್ಕೆ ಆಗ್ರಹಿಸಿದ್ದಾರೆ.