ಕೋಲ್ಕತ್ತಾ: ಸಾಲ ಮರುಪಾವತಿ ಮಾಡಲು ಸಾಧ್ಯವಾಗದೆ ಯುವತಿಯೊಬ್ಬಳು ಸಾವಿಗೆ ಶರಣಾದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದಾಕೆಯನ್ನು ಪಾಯೆಲ್ ಸಹಾ(24) ಎಂದು ಗುರುತಿಸಲಾಗಿದೆ. ಈಕೆ ತನ್ನ ಅಜ್ಜಿಯಲ್ಲಿ ನನಗೆ ನೂಡಲ್ಸ್ ತಿನ್ನಬೇಕು ಮಾಡಿಕೊಡು ಎಂದು ಹೇಳಿ ಅಡುಗೆ ಮನೆಗೆ ಕಳಿಸಿ ಹೇಳಿ ರಾತ್ರಿ 10.30ರ ಸುಮಾರಿಗೆ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ಸಹಾ ಕೋಲ್ಕತ್ತಾದ ಹರಿದೇವ್ಪುರ ನಿವಾಸಿ. ಈಕೆಯ ತಂದೆ ರಿಕ್ಷಾ ಓಡಿಸುತ್ತಿದ್ದು, ಈ ಮೂಲಕ ಬದುಕಿನ ಬಂಡಿ ಸಾಗುತ್ತಿತ್ತು. ಸೋಮವಾರ ಮಧ್ಯಾಹ್ನದ ಬಳಿಕ ಮಹಿಳೆಯ ಪೋಷಕರು ಪಶ್ಚಿಮ ಬಂಗಾಳದಲ್ಲಿರುವ ತರಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲೆಂದು ತೆರಳಿದ್ದರು. ಇದೇ ಸಂದರ್ಭದಲ್ಲಿ ಸಹಾ ತನ್ನ ಅಜ್ಜಿಯನ್ನು ಅಡುಗೆ ಮನೆಗೆ ಕಳಿಸಿದ್ದಾಳೆ. ಇತ್ತ ಸಹೋದರಿಯನ್ನು ಮಾರುಕಟ್ಟೆಗೆ ಕಳುಹಿಸಿದ್ದಾಳೆ. ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸಹಾ ಹೋಟೆಲ್ ಮ್ಯಾನೇಜ್ಮೆಂಟ್ ಓದಲು ಬ್ಯಾಂಕಿನಿಂದ ಸಾಲ ಪಡೆದಿದ್ದಳು. ಈ ಸಾಲವನ್ನು ತಾನೇ ತೀರಿಸಬೇಕು ಅಂತ ನಿರ್ಧರಿಸಿದ್ದಳು. ಆದರೆ ಮಹಾಮಾರಿ ಕೊರೊನಾದಿಂದಾಗಿ ಆಕೆ 2019ರಿಂದಲೂ ಕೆಲಸ ಸಿಕ್ಕಿರಲಿಲ್ಲ. ಇದರಿಂದ ತನ್ನ ಕನಸು ನನಸಾಗಲಿಲ್ಲ ಎಂದು ಆಕೆ ಬೇಸರಗೊಂಡಿದ್ದಳು.
ಇತ್ತ ಸಾಲ ವಾಪಸ್ ಮಾಡುವ ಸಲುವಾಗಿ ಸಹಾ ಕ್ಲಬ್ ಒಂದರಲ್ಲಿ ಕೆಲಸ ಮಾಡಲು ಆರಂಭಿಸಿದಳು. ಆದರೆ ಆಕೆಯ ಗಳಿಕೆ ಸಾಲ ತೀರಿಸಲು ಸಾಲುತ್ತಿರಲಿಲ್ಲ. ಅಲ್ಲದೆ ಮನೆಯಲ್ಲಿ ಕೂಡ ಕೆಲವೊಂದು ಸಮಸ್ಯೆಗಳು ಆರಂಭವಾದವು. ಇದೇ ಕಾರಣದಿಂದ ಮಹಿಳೆ ಸಾವಿನ ನಿರ್ಧಾರ ಮಾಡಿರುವುದಾಗಿ ಮೇಲ್ನೋಟಕ್ಕೆ ತಿಳಿದುಬಂದಿದೆ.
ಈ ಬಗ್ಗೆ ತನಿಖೆ ನಡೆಸುವ ಅಗತ್ಯವಿಲ್ಲ. ಮಹಿಳೆ ಕೆಲಸದ ಒತ್ತಡಕ್ಕೆ ಒಳಗಾಗಿದ್ದಾಳೆ ಅಥವಾ ವೈಯಕ್ತಿಕ ಸಮಸ್ಯೆಗಳನ್ನು ಹೊಂದಿದ್ದರಿಂದ ಈ ತೀರ್ಮಾನ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇತ್ತ ಮಹಿಳೆ ಡೆತ್ ನೋಟ್ ಕೂಡ ಬರೆದಿಟ್ಟಿದ್ದು, ಅದರಲ್ಲಿ ನನ್ನ ಸಾವಿಗೆ ಯಾರೂ ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.