ಅಕ್ರಮ ಸಂಬಂಧ – ಟ್ರ್ಯಾಕ್ಟರ್ ಹತ್ತಿಸಿ ಮನೆ ಸೊಸೆ, ಆಕೆಯ ಗೆಳೆಯನನ್ನು ಕೊಂದ ತಂದೆ, ಮಗ

Public TV
2 Min Read
crime

– ಓಡಿ ಹೋಗಿದ್ದವರನ್ನು ಕಾಣೆಯಾದ ಪ್ರಕರಣ ದಾಖಲಿಸಿ ಕರೆಸಿದರು
– ಸ್ವಲ್ಪ ದಿನ ಕಳೆಯುತ್ತಿದ್ದಂತೆ ಟ್ರ್ಯಾಕ್ಟರ್ ಹತ್ತಿಸಿ ಬರ್ಬರವಾಗಿ ಕೊಲೆ

ಮುಂಬೈ: ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮಹಿಳೆ ಹಾಗೂ ಆಕೆಯ ಸ್ನೇಹಿತನ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಮಾವ ಹಾಗೂ ಆತನ ಮಗನನ್ನು ಬಂಧಿಸಲಾಗಿದೆ. ಚಾಪಾಲ್ಗಾಂವ್ ನಿವಾಸಿಗಳಾದ ಬಾತ್ವೆಲ್ ಸಂಪತ್ ಲಾಲ್ಜಾರೆ ಹಾಗೂ ಅವರ ಮಗ ವಿಖಾಸ್ ಲಾಲ್ಜಾರೆಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ ಎಂದು ಅಂಬಾಡ್ ಠಾಣೆಯ ಇನ್‍ಸ್ಪೆಕ್ಟರ್ ಅನಿರುದ್ಧ ನಾಂದೇಡ್ಕರ್ ತಿಳಿಸಿದ್ದಾರೆ.

Police Jeep 1 2 medium

ಬಾತ್ವೆಲ್ ಲಾಲ್ಜಾರೆ ಕೊಲೆಯಾದ ಮಹಿಳೆ ಮಾರಿಯಾಳ ಮಾವನಾಗಿದ್ದು, ವಿಖಾಸ್ ಲಲ್ಜಾರೆ ಮಹಿಳೆಯ ಅಳಿಯ. 32 ವರ್ಷದ ಮಾರಿಯಾ ಲಲ್ಜಾರೆ ಪತಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದು, ತಮ್ಮ ಮಾವ ಹಾಗೂ ಅಳಿಯಂದಿರೊಂದಿಗೆ ಮಹಿಳೆ ವಾಸವಿದ್ದಳು. ಅಲ್ಲದೆ ಅದೇ ಗ್ರಾಮದ ವಿವಾಹಿತ ವ್ಯಕ್ತಿ ಅರ್ಬಕ್ ಭಾಗ್ವತ್(27) ಜೊತೆ ಅಕ್ರಮ ಸಂಬಂಧ ಹೊಂದಿದ್ದಳು.

ಇದಕ್ಕೆ ಮಹಿಳೆಯ ಮಾವ ಹಾಗೂ ಅಳಿಯಂದಿರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಹಲವು ಬಾರಿ ಭಾಗ್ವತ್‍ಗೆ ಬೆದರಿಕೆ ಸಹ ಹಾಕಿದ್ದರು. ತಂದೆ, ಮಗ ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಭಾಗ್ವತ್ ಅಂಬಾಡ್ ಪೊಲೀಸ್ ಠಾಣೆಯಲ್ಲಿ ಹಾಗೂ ಎಸ್‍ಪಿಗೆ ದೂರು ದಾಖಲಿಸಿದ್ದರು.

police 1 e1585506284178 1 medium

ಇದಾದ ಬಳಿಕ ಮಾರ್ಚ್ 30 ರಂದು ಭಾಗ್ವತ್ ಹಾಗೂ ಮಾರಿಯಾ ಇಬ್ಬರೂ ಓಡಿ ಹೋಗಿ ಗುಜರಾತ್‍ನಲ್ಲಿ ತಂಗಿದ್ದರು. ಬಳಿಕ ಮಾರಿಯಾ ಮನೆ ಕಡೆಯವರು ಕಾಣೆಯಾಗಿರುವ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಹೀಗಾಗಿ ಏಪ್ರಿಲ್ 22ರಂದು ಪೊಲೀಸರು ಇಬ್ಬರನ್ನೂ ಗುಜರಾತ್‍ನಿಂದ ಮರಳಿ ಕರೆ ತಂದಿದ್ದರು. ಇದಾದ ಬಳಿಕ ಇಬ್ಬರೂ ಒಟ್ಟಿಗೆ ಅದೇ ಊರಿನಲ್ಲಿ ವಾಸಿಸುತ್ತಿದ್ದರು.

ಅಕ್ಟೋಬರ್ 28 ರಂದು ಈ ಜೋಡಿ ಕಾರ್ಯಕ್ರಮಕ್ಕೆಂದು ಹತ್ತಿರದ ಹಳ್ಳಿಗೆ ಬೈಕ್ ಮೇಲೆ ತೆರಳಿತ್ತು. ಇದನ್ನು ಗಮನಿಸಿ ಆರೋಪಿ ವಿಕಾಸ್ ಲಾಲ್ಜಾರೆ ಜೋಡಿ ಇದ್ದ ಬೈಕ್‍ಗೆ ಟ್ರ್ಯಾಕ್ಟರ್ ಗುದ್ದಿಸಿದ್ದು, ಅವರು ಕೆಳಗೆ ಬೀಳುತ್ತಿದ್ದಂತೆ ಇಬ್ಬರ ಮೇಲೂ ಟ್ರ್ಯಾಕ್ಟರ್ ಹಾಯಿಸಿದ್ದಾನೆ. ಈ ವೇಳೆ ಇಬ್ಬರಿಗೂ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ತೀವ್ರ ಗಾಯಗಳಾಗಿದ್ದರಿಂದ ಇಬ್ಬರೂ ಸಾವನ್ನಪ್ಪಿದ್ದಾರೆ.

Police Jeep

ಭಾಗ್ವತ್ ಪತ್ನಿ ಈ ಕುರಿತು ಮಾತನಾಡಿ, ವಿಕಾಸ್ ಲಾಲ್ಜಾರೆ ಹಾಗೂ ಆತನ ತಂದೆ ಇಬ್ಬರೂ ಸೇರಿ ನನ್ನ ಪತಿ ಹಾಗೂ ಮಾರಿಯಾಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಕಾಸ್ ಹಾಗೂ ಆತನ ತಂದೆಯ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಇನ್ಸ್‍ಪೆಕ್ಟರ್ ನಾಂದೇಡ್ಕರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *