ಹುಬ್ಬಳ್ಳಿ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡಿದ್ದಾರೆ ಅಂತಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪೊಲೀಸ್ ತಂಡದ ಜೊತೆ ದಾಳಿ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಆದರೆ ಅಕ್ರಮ ಅಕ್ಕಿ ಸಾಗಾಟ ಪ್ರಕರಣವನ್ನ ಬಯಲಿಗೆ ಎಳೆಯಲು ಸಾಧ್ಯವಾಗದೇ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸಾಗಿದ್ದಾರೆ.
ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡಿದ ಸಂಶಯಾಸ್ಪದ ಆರೋಪದ ಮೇಲೆ ಬೆಳಗಾವಿ ನಂದಗಡದ ಪೊಲೀಸರು ಮಂಗಳವಾರ ಮುಂಬೈಗೆ ಅಕ್ಕಿ ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನ ವಶಪಡಿಸಿದ್ದರು. ಈ ಕುರಿತು ಇಂದು ಹುಬ್ಬಳ್ಳಿಯ ಬಂಕಾಪುರ ಚೌಕ್ ಬಳಿಯ ಬಾಲಾಜಿ ಟ್ರೇಡರ್ಸ್ ಗೋಡೌನ್ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು.
ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಗೋಡೌನ್ ನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನೂರಾರು ಪೊಲೀಸರು ಅಧಿಕಾರಿಗಳು ನಡೆಸಿದ ದಾಳಿ ವೇಳೆ ಅಕ್ರಮ ಎನ್ನುವುದನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ.
ಆಹಾರ ಮತ್ತು ನಾಗರಿಕ ಇಲಾಖೆ ಹಾಗೂ ವಿವಿಧ ಮಠಗಳು ಈ ಹಿಂದೆ ಹರಾಜು ಹಾಕಿದ ಅಕ್ಕಿಯನ್ನ ಖರೀದಿಸಿ, ಬೇರಡೆ ಮಾರಾಟ ಮಾಡಲು ಸಾಗಿಸುತ್ತಿದ್ದ ವೇಳೆ ಪೊಲೀಸರು ತಪ್ಪು ಮಾಹಿತಿಯಿಂದ ಅಕ್ಕಿ ಲಾರಿಗಳನ್ನ ಹಿಡಿದಿದ್ದಾರೆ. ನಾನು ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟ ಮಾಡುತ್ತಿಲ್ಲ. ನನ್ನ ಬಳಿ ಎಲ್ಲ ದಾಖಲೆಗಳಿವೆ ಎಂದು ಬಾಲಾಜಿ ಟ್ರೇಡರ್ಸ್ನ ಮಂಜುನಾಥ ಹರ್ಲಾಪುರ ಮಾಧ್ಯಮದವರಿಗೆ ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ನಂದಗಡದಿಂದ ಬಂದಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಆಹಾರ ಮತ್ತು ನಾಗರಿಕ ಇಲಾಖೆ ಅಧಿಕಾರಿಗಳು ಸುಮಾರು 6 ಗಂಟೆಗಳ ಕಾಲ ಪರಿಶೀಲನೆ ನಡೆಸಿದ ನಂತರವೂ ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡದೇ ದಾಳಿಯ ನಂತರ ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿ ಹೋಗಿದ್ದಾರೆ.