ಬಾಗಲಕೋಟೆ: ಅಕ್ರಮವಾಗಿ ಅಕ್ಕಿ ಸಂಗ್ರಹ ಮಾಡಿದ್ದ ಗೋದಾಮಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿ 6 ಮಂದಿ ಅಕ್ಕಿ ಖದೀಮರನ್ನು ಬಂಧಿಸಿದ ಘಟನೆ ನಿನ್ನೆ ರಾತ್ರಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದಲ್ಲಿ ನಡೆದಿದೆ.
ದೇಸಾಯಿ ಬಾವಿ ಪ್ರದೇಶದಲ್ಲಿ ಇರುವ ಗೋದಾಮಿಗೆ ಭೇಟಿ ನೀಡಿದ ಅಧಿಕಾರಿಗಳು, 16 ಕ್ವಿಂಟಾಲ್ 40 ಕೆಜಿ ಅಕ್ಕಿ ವಶಪಡಿಸಿಕೊಂಡಿದ್ದಾರಲ್ಲದೇ, ಯಾಸೀನ್ ಹಾಗೂ ರಿಯಾಜ್ನನ್ನು ಅಕ್ರಮ ಅಕ್ಕಿ ಸಂಗ್ರಹದ ಆರೋಪದ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಸಂಗ್ರಹವಾದ ಅಕ್ಕಿ ಬಡವರ ಪಾಲಿನ ಪಡಿತರ ಅಕ್ಕಿಯಾಗಿದ್ದು, ಬಡವರು ಅಕ್ಕಿ ಪಡೆದು ಮನೆಗೆ ಹೋದ ಬಳಿಕ ದುಡ್ಡಿನಾಸೆ ತೋರಿಸಿ ಅವರಿಂದ ಖರೀದಿ ಮಾಡುತ್ತಿದ್ದರು ಎನ್ನಲಾಗಿದೆ.
ಆಹಾರ ಇಲಾಖೆ ತಾಲೂಕು ಅಧಿಕಾರಿ ಬಸವರಾಜ್ ಜಗಳೂರ, ಪಿಎಸ್ ಐ ವಿಜಯ ಕಾಂಬಳೆ, ಗ್ರಾಮ ಲೆಕ್ಕಾಧಿಕಾರಿ ಮಠಪತಿ ಸೇರಿ ಗೋದಾಮಿನ ಮೇಲೆ ದಾಳಿ ನಡೆಸಿ, ಅಕ್ರಮ ಅಕ್ಕಿಯನ್ನ ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನ ಬಂದಿಸಿದ್ದಾರೆ. ಅಲ್ಲದೇ ರಬಕವಿ ಪಟ್ಟಣದಲ್ಲಿ ನಾಲ್ವರು ಆರೋಪಿಗಳು ಸೇರಿ ಒಂದು ಕಡೆಗೆ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿದ್ದರು. ದಾಳಿ ನಡೆಸಿದ ಅಧಿಕಾರಿಗಳ ತಂಡ ವೇಳೆ ಒಟ್ಟು 32 ಕ್ವಿಂಟಲ್ 50 ಕೆಜಿ ಅಕ್ಕಿ ಜಪ್ತಿ ಮಾಡಿದೆ. ಅಲ್ಲದೇ ಅಕ್ರಮ ಅಕ್ಕಿ ಸಂಗ್ರಹಣೆಕಾರರಾದ ರಿಯಾಜ್, ಕರೀಂ, ಅಬೂಕರ, ಕಾಶೀಮ್ ಸಾಬ ನಾಲ್ವರ ವಿರುದ್ದ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ. ಅಕ್ರಮವಾಗಿ ಸಂಗ್ರಹಿಸಿದ ಅಕ್ಕಿಯನ್ನು ಈ ಆರೋಪಿಗಳು ಮಹಾರಾಷ್ಟ್ರಕ್ಕೆ ಸರಬರಾಜು ಮಾಡುತ್ತಿದ್ದರು ಎನ್ನಲಾಗುತ್ತಿದೆ.