ಬೆಂಗಳೂರು: ಅಕ್ಕನನ್ನು ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್ ಹೊಲಸು ರಾಜಕಾರಣ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆಯ ಸಹೋದರ ಗಂಭೀರ ಆರೋಪ ಮಾಡಿದ್ದಾರೆ.
ವಿಶೇಷ ತನಿಖಾ ತಂಡದ(ಎಸ್ಐಟಿ) ಪೊಲೀಸರ ವಿಚಾರಣೆಯ ಬಳಿಕ ಮಾಧ್ಯಮಗಳ ಜೊತೆ ಸಿಡಿ ಲೇಡಿಯ ತಂದೆ, ತಾಯಿ ಮತ್ತು ಪೋಷಕರು ಮಾತನಾಡಿದರು. ಸಹೋದರ ಮಾತನಾಡಿ, ಅಕ್ಕನನ್ನು ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್ ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಅಕ್ಕನಿಗೆ ಶಿವಕುಮಾರ್ ದುಡ್ಡು ಕೊಟ್ಟು ಗೋವಾಗೆ ಕಳುಹಿಸಿದ್ದಾರೆ ಎಂದು ನೇರವಾಗಿಯೇ ಗಂಭೀರ ಆರೋಪ ಮಾಡಿದರು.
ಈ ವೇಳೆ ನರೇಶ್ ಗೌಡ ಸುಳ್ಳುಗಾರ. ಅಕ್ಕನೇ ಫೋನ್ ಮಾಡಿ ಡಿಕೆಶಿ ದುಡ್ಡು ಕೊಟ್ಟಿದ್ದಾರೆ ಎಂದು ಹೇಳಿದ್ದಾಳೆ. ಗಂಡಸಾಗಿದ್ದರೆ ಕೂಡಲೇ ಅಕ್ಕನನ್ನು ಬಿಟ್ಟುಬಿಡಿ ಎಂದು ಸಿಡಿ ಗ್ಯಾಂಗ್ ಸದಸ್ಯರಿಗೆ ಹೇಳಿದರು.
ತಂದೆ ಮಾತನಾಡಿ, ಮಗಳು ವಿಡಿಯೋ ಮಾಡಿ ನಮಗೆ ರಕ್ಷಣೆ ನೀಡಬೇಕು ಎಂದು ಕೇಳಿದ್ದಾಳೆ. ಆದರೆ ನಾನು ಒಬ್ಬ ನಿವೃತ್ತ ಸೈನಿಕ. ನಮಗೆ ಯಾರ ರಕ್ಷಣೆಯ ಅಗತ್ಯವಿಲ್ಲ. ಮಗಳ ರಕ್ಷಣೆ ಹೇಗೆ ಮಾಡಬೇಕು ಎನ್ನುವುದು ಗೊತ್ತಿದೆ. ದಯವಿಟ್ಟು ನನ್ನ ಮಗಳನ್ನು ನಮಗೆ ಕೊಟ್ಟುಬಿಡಿ ಎಂದು ಮನವಿ ಮಾಡಿಕೊಂಡರು.
ಈ ವೇಳೆ ನಿಮಗೆ ಒತ್ತಡ ಇದ್ಯಾ ಎಂದು ಕೇಳಿದ್ದಕ್ಕೆ, ನಮಗೆ ಯಾರ ಒತ್ತಡ ಇಲ್ಲ. ನಾನೊಬ್ಬ ನಿವೃತ್ತ ಸೈನಿಕ. ಯಾರ ಒತ್ತಡಕ್ಕೆ ಒಳಗಾಗಿ ನಾನು ಹೇಳಿಕೆ ನೀಡುತ್ತಿಲ್ಲ ಎಂದು ತಿಳಿಸಿದರು.