ಭುವನೇಶ್ವರ: ಸರಿಯಾದ ರಸ್ತೆ ಇಲ್ಲದ ಕಾರಣ ರೋಗಿಗಳನ್ನು ಅಂಬುಲೆನ್ಸ್ ಗೆ ತಲುಪಿಸಲು 5 ಕಿಲೋಮೀಟರ್ ಎತ್ತಿನ ಗಾಡಿಯಲ್ಲಿ ಕರೆದುಕೊಂಡು ಹೋಗಿರುವ ಘಟನೆ ಓಡಿಶಾದ ನಬರಂಗ್ಪುರ ಜಿಲ್ಲೆಯ ಚಂದಹಂಡಿ ಬ್ಲಾಕ್ನ ಅಡಿಯಲ್ಲಿರುವ ಪಟಖಲಿಯಾ ಪ್ರದೇಶದ ನಡೆದಿದೆ.
ಈ ಗ್ರಾಮದಲ್ಲಿ ಅತಿಸಾರ ಮತ್ತು ವಾಂತಿಯಿಂದ ಮೂವರು ರೋಗಿಗಳು ಬಳಲುತ್ತಿದ್ದರು. ಗ್ರಾಮಕ್ಕೆ ಬರಲು ಪಕ್ಕಾ ರಸ್ತೆ ಇಲ್ಲದ ಕಾರಣ ಅಂಬುಲೆನ್ಸ್ ಬರಲು ಸಾಧ್ಯವಾಗಲಿಲ್ಲ. ಆಗ ಸ್ಥಳೀಯರು ಸೇರಿಕೊಂಡು 5ಕಿ.ಮೀ ಎತ್ತಿನಗಾಡಿಯಲ್ಲಿ ರೋಗಿಗಳನ್ನು ಕರೆದುಕೊಂಡು ಬಂದು ಅಂಬುಲೆನ್ಸ್ ಇರುವಲ್ಲಿಗೆ ತಲುಪಿಸಿದ್ದಾರೆ.
ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಸ್ಥಳೀಯರು ಅಂಬುಲೆನ್ಸ್ ಸೇವೆ ಮೋರೆ ಹೋಗಿದ್ದಾರೆ. ಆದರೆ ರೋಗಿಗಳನ್ನು ಸಂಪರ್ಕಿಸುವ ರಸ್ತೆಗಳ ಕಳಪೆ ಸ್ಥಿತಿಯಲ್ಲಿತ್ತು. ಹೀಗಾಗಿ ಅಂಬುಲೆನ್ಸ್ ಬಂದು ಗ್ರಾಮವನ್ನು ತಲುಪಲು ಸಾಧ್ಯವಾಗಲಿಲ್ಲ. ಆಗ ಈ ಊರಿಗೆ ಬೇರೆ ದಾರಿಯಿಲ್ಲದ ಕಾರಣ ಮೂವರು ರೋಗಿಗಳನ್ನು ಎತ್ತಿನ ಬಂಡಿಯಲ್ಲಿ ಕೂರಿಸಿಕೊಂಡು 5 ಕಿ.ಮೀ ದೂರದಲ್ಲಿರುವ ಅಂಬುಲೆನ್ಸ್ ಬಳಿ ಕರೆದುಕೊಂಡು ಹೋಗಿದ್ದಾರೆ.
ನಂತರ ಅಂಬುಲೆನ್ಸ್ ನಲ್ಲಿ ರೋಗಿಗಳನ್ನು ಕರೆದುಕೊಂಡು ಹೋಗಿ ಹತ್ತಿರದ ಚಂದಹಂಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಮೂವರು ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಮಾಹಿತಿ ನೀಡಿದ್ದಾರೆ.
ಅಂಬುಲೆನ್ಸ್ ನ ಬೇಡಿಕೆಯನ್ನು ಪೂರೈಸುವ ಸಲುವಾಗಿ, ಸಿಎಂ ನವೀನ್ ಪಟ್ನಾಯಕ್ ಅವರು ರಾಜ್ಯದಲ್ಲಿ ಆರೋಗ್ಯ ಸೇವೆಗಳನ್ನು ಬಲಪಡಿಸಲು ಹೆಚ್ಚುವರಿ 108 ಮತ್ತು 102 ಅಂಬುಲೆನ್ಸ್ ಗಳನ್ನು ಸೇರಿಸುತ್ತಿದ್ದಾರೆ. ಆದರೂ ಗ್ರಾಮೀಣ ಭಾಗಗಳಲ್ಲಿ ಇದನ್ನು ಅನುಷ್ಠಾನಗೊಳಿಸುವುದು ಒಂದು ಕಳವಳವಾಗಿದೆ.