ಮಂಗಳೂರು: ಅಂಬುಲೆನ್ಸ್ ಗೆ ದಾರಿ ಬಿಡದೆ ತೊಂದರೆ ಕೊಟ್ಟ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಹೊರವಲಯದ ಕುಂಪಲ ನಿವಾಸಿ ಚರಣ್(31) ಬಂಧಿತ ವ್ಯಕ್ತಿ. ಈತನ ಕಾರನ್ನು ಸಹ ಮಂಗಳೂರು ನಗರ ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮವಾರ ಸಂಜೆ ದೇರಳಕಟ್ಟೆ ಕಣಚೂರು ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ರೋಗಿಯನ್ನು ಕೊಂಡೊಯ್ಯುತ್ತಿದ್ದ ವೇಳೆ ನಗರದ ಜಪ್ಪಿನಮೊಗರು ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ KA 19 MJ 8924 ನಂಬರ್ ನ ಎರ್ಟಿಗಾ ಕಾರುನ್ನು ಚಾಲಕ ಅಡ್ಡಾದಿಡ್ಡಿ ಚಲಾಯಿಸಿ ಅಂಬುಲೆನ್ಸ್ ಗೆ ತೊಂದರೆ ಕೊಟ್ಟಿದ್ದ.
ಅಂಬುಲೆನ್ಸ್ ಗೆ ದಾರಿ ಕೊಡದೆ ಕಿಲೋಮೀಟರ್ ಗಟ್ಟಲೆ ಕಾರ್ ಚಲಾಯಿಸಿದ್ದ. ಚಾಲಕನ ಕೃತ್ಯವನ್ನು ಅಂಬುಲೆನ್ಸ್ ನಲ್ಲಿದ್ದವರು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದರು. ಬಳಿಕ ಈ ವೀಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಾರು ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 279 ಮತ್ತು ಮೋಟಾರು ವಾಹನ ಕಾಯ್ದೆ 194(ಇ) ಅಡಿಯಲ್ಲಿ ಕೇಸ್ ದಾಖಲಿಸಿದ್ದು, ಕಾರು ಚಾಲಕ ಚರಣ್ ನನ್ನು ಬಂಧಿಸಲಾಗಿದೆ.