ಮಡಿಕೇರಿ: ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೋರ್ವ ಇಂದು ಅಸ್ಪತ್ರೆಯ ಅಂಬುಲೆನ್ಸ್ಗಾಗಿ ಕಾದು ನಡು ರಸ್ತೆಯಲ್ಲೆ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬಜೆಗುಂಡಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕ ಮನು(23) ಎಂದು ಗುರುತಿಸಲಾಗಿದ್ದು, ಈತ ಬಜೆಗುಂಡಿ ಗ್ರಾಮದ ನಿವಾಸಿ. ಎರಡು ಮೂರು ದಿನಗಳಿಂದ ಶೀತ ಜ್ವರದಿಂದ ಬಳಲುತ್ತಿದ್ದ ಮನು ಮಂಗಳವಾರ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಕೊಟ್ಟು ಮನೆಗೆ ತೆರಳಿದ್ದಾನೆ.
ಬುಧವಾರ ಜ್ವರದಿಂದ ಬಳಲಿ ನಿತ್ರಾಣಗೊಂಡು ಮಧ್ಯಾಹ್ನ 12.30ಕ್ಕೆ ಅಂಬುಲೆನ್ಸ್ಗೆ ಕರೆ ಮಾಡಿದ್ದಾನೆ. ನಂತರ ಬಜೆ ಗುಂಡಿ ಗ್ರಾಮದ ರಸ್ತೆಯ ಪಕ್ಕಕ್ಕೆ ಬಂದು ಬಿದ್ದಿದ್ದಾರೆ. ಅಂಬುಲೆನ್ಸ್ ಬರುವ ತನಕ ರಸ್ತೆಯಲ್ಲೇ ಬಿದ್ದು ನರಳಿದ್ದಾರೆ. ಸತತವಾಗಿ ಗಂಟೆಗಟ್ಟಲೇ ಅಂಬುಲೆನ್ಸ್ಗಾಗಿ ಕಾದರೂ ಸ್ಥಳಕ್ಕೆ ಅಂಬುಲೆನ್ಸ್ ಬಂದಿರಲ್ಲಿಲ್ಲ. ಹಲವಾರು ಬಾರಿ ಅಸ್ಪತ್ರೆಗೆ ಕರೆ ಮಾಡುವ ವೇಳೆಯಲ್ಲಿ ಈಗ ಬರುವುದು ಆಗಾ ಬರುವುದಾಗಿ ತಿಳಿಸಿದ್ದಾರೆ.
ಅದರೂ ಮೂರು ಗಂಟೆಗಳ ಕಾಲ ತಡವಾಗಿ ಅಂಬುಲೆನ್ಸ್ ಬಂದಿದೆ. ಇನ್ನೂ ಮಗ ಬಿದ್ದಿದ್ದ ಸ್ಥಳಕ್ಕೆ ತಾಯಿ ಗೌರಿ, ಆಶಾ ಕಾರ್ಯಕರ್ತೆ ಹಾಗೂ ಆರೋಗ್ಯ ಸಿಬ್ಬಂದಿ ಬಂದು ಆತನನ್ನು ಅಂಬುಲೆನ್ಸ್ ಒಳಗೆ ಮಲಗಿಸಿದ್ದಾರೆ. ಅದರೆ ಅನಾರೋಗ್ಯದಿಂದ ಬಳಲಿದ್ದ ಯುವಕ ದಾರಿ ಮಧ್ಯೆ ಮೃತಪಟ್ಟಿದ್ದಾನೆ.