– ಪೊಲೀಸರಿಂದಲೇ ಗರ್ಭಿಣಿಯ ಅಂತ್ಯಕ್ರಿಯೆ
ಹೈದರಾಬಾದ್: ಒಂಬತ್ತು ತಿಂಗಳ ಗರ್ಭಿಣಿ ಮೃತದೇಹವನ್ನು ಕುಟುಂಬದವರೇ ಅರಣ್ಯದಲ್ಲಿ ಮರವೊಂದಕ್ಕೆ ಕಟ್ಟಿ ಬಿಟ್ಟು ಹೋಗಿದ್ದ ಅಮಾನವೀಯ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
ಲಾವಣ್ಯ ಮೃತ ಗರ್ಭಿಣಿ. ಸ್ಥಳೀಯರು ಗ್ರಾಮದ ಮಹಿಳೆಯ ಅಂತಿಮ ವಿಧಿ-ವಿಧಾನಗಳನ್ನು ಮಾಡಲು ತಡೆದಿದ್ದಾರೆ. ನಂತರ ಕುಟುಂಬದರು ರುದ್ರವರಂನ ಅರಣ್ಯ ಪ್ರದೇಶದಲ್ಲಿ ಆಕೆಯ ಶವವನ್ನು ಮರಕ್ಕೆ ಕಟ್ಟಿ ಬಿಟ್ಟು ಹೋಗಿದ್ದರು.
ಏನಿದು ಪ್ರಕರಣ?
ಮೃತ ಲಾವಣ್ಯ ಜಿಲ್ಲೆಯ ಬಿ.ನಾಗಿರೆಡ್ಡಿಪಲ್ಲೆ ಗ್ರಾಮದ ಧರ್ಮೇಂದ್ರನ ಜೊತೆ ಮದುವೆಯಾಗಿದ್ದಳು. ಈಕೆಯ ಪತಿ ದೈನಂದಿನ ಕೂಲಿ ಕಾರ್ಮಿಕನಾಗಿದ್ದು, ಲಾವಣ್ಯ ತುಂಬು ಗರ್ಣಿಣಿಯಾಗಿದ್ದು, ಹೆರಿಗೆಗಾಗಿ ಪಕ್ಕದ ಸಿರಿವೆಲ್ಲಾ ಮಂಡಲದಲ್ಲಿರುವ ತನ್ನ ತವರು ಮನೆಗೆ ಹೋಗಿದ್ದಳು. ಪೋಷಕರು ಶುಕ್ರವಾರ ಗರ್ಭಿಣಿಯನ್ನು ನಂದ್ಯಾಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಹೆರಿಗೆಯ ಸಮಯದಲ್ಲಿ ತೊಂದರೆಯಾಗಿ ಶನಿವಾರ ಲಾವಣ್ಯ ಮೃತಪಟ್ಟಿದ್ದಾಳೆ.
ಆಕೆಯ ಅಂತ್ಯ ಸಂಸ್ಕಾರಕ್ಕಾಗಿ ಕುಟುಂಬದವರು ಮೃತದೇಹವನ್ನು ನಾಗಿರೆಡ್ಡಿಪಲ್ಲೆಗೆ ತೆಗೆದುಕೊಂಡು ಬಂದಿದ್ದಾರೆ. ಅಲ್ಲಿ ಆಚರಣೆಗಳ ಪ್ರಕಾರ ಮೃತದೇಹವನ್ನು ಸಮಾಧಿ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಇದೇ ವೇಳೆ ಗ್ರಾಮಸ್ಥರು ಬಂದು ಗರ್ಭಿಣಿಯ ಅಂತಿಮ ವಿಧಿ-ವಿಧಾನಗಳನ್ನು ಗ್ರಾಮದಲ್ಲಿ ನೆರವೇರಿಸುವುದರಿಂದ ಗ್ರಾಮಕ್ಕೆ ಒಳಿತಾಗುವುದಿಲ್ಲ. ಅಲ್ಲದೇ ಶವಸಂಸ್ಕಾರ ಮಾಡಿದರೆ ಗ್ರಾಮಕ್ಕೆ ಮಳೆ ಬರುವುದಿಲ್ಲ ಎಂದು ಅಂತ್ಯಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಲಿಲ್ಲ.
ಕುಟುಂವದರು ಮನವಿ ಮಾಡಿಕೊಂಡು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಬೇರೆ ದಾರಿಯಿಲ್ಲದೆ ಕುಟುಂಬದವರು ಮೃತದೇಹವನ್ನು ಹತ್ತಿರದ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಮರಕ್ಕೆ ಕಟ್ಟಿ ವಾಪಸ್ಸಾಗಿದ್ದಾರೆ. ಮರುದಿನ ಕಾಡಿನಲ್ಲಿ ಕಟ್ಟಿಗೆ ಸಂಗ್ರಹಿಸಲು ಹೋದಾಗ ನೆರೆಹೊರೆಯ ಗ್ರಾಮಸ್ಥರು ನೋಡಿ ರುದ್ರವರಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.
Andhra Pradesh: Police y'day performed last rites of a pregnant woman who died during childbirth in Kurnool's B Nagireddypalli village,after some locals objected to her funeral due to superstition. Her family had to leave her body tied to a tree in forest. Police booked 15 people pic.twitter.com/d0UV1d0e3y
— ANI (@ANI) June 29, 2020
ವಿಚಾರಣೆಯ ನಂತರ ನಾವು ಮೃತ ಮಹಿಳೆಯ ಕುಟುಂಬದವರನ್ನು ಪತ್ತೆ ಹಚ್ಚಿದ್ದೇವೆ. ಗ್ರಾಮದಲ್ಲಿ ಮಹಿಳೆಯ ಅಂತ್ಯಕ್ರಿಯೆ ಮಾಡಲು ಗ್ರಾಮಸ್ಥರು ಅವಕಾಶ ನೀಡಲಿಲ್ಲ. ಹೀಗಾಗಿ ಕುಟುಂಬದರು ಕಾಡಿನಲ್ಲಿ ಮೃತದೇಹವನ್ನು ಮರಕ್ಕೆ ಕಟ್ಟಿ ಬಿಟ್ಟು ಹೋಗಿದ್ದಾರೆ. ನಾವು ಗ್ರಾಮಸ್ಥರ ಮನವೊಲಿಸಲು ಪ್ರಯತ್ನ ಮಾಡಿದೆವು ಎಂದು ಸಬ್ ಇನ್ಸ್ ಪೆಕ್ಟರ್ ರಾಮಮೋಹನ್ ರೆಡ್ಡಿ ತಿಳಿಸಿದರು.
ಗ್ರಾಮಸ್ಥರು ಗ್ರಾಮದಲ್ಲಿ ಮಹಿಳೆಯ ಅಂತ್ಯಕ್ರಿಯೆ ಮಾಡಲು ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಪೊಲೀಸರೇ ಲಾವಣ್ಯ ಅಂತಿಮ ವಿಧಿ-ವಿಧಾನಗಳನ್ನು ಮಾಡಿದ್ದಾರೆ. ನಂತರ ಈ ಕುರಿತು 15 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.