ಬೆಳಗಾವಿ/ಚಿಕ್ಕೋಡಿ: ಅಂತರಾಷ್ಟ್ರೀಯ ಮ್ಯಾರಥಾನ್ ಓಟದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಬ್ಬರು ಯುವಕರು ಚಿನ್ನ, ಬೆಳ್ಳಿ ಪದಕ ಪಡೆಯುವ ಮೂಲಕ ಕರ್ನಾಟಕದ ಕೀರ್ತಿಯನ್ನು ಮತಷ್ಟು ಹೆಚ್ಚಿಸಿದ್ದಾರೆ.
ಫೆ.27ರಂದು ನೇಪಾಳದ ಪೊಖರಾದಲ್ಲಿ ಅಂತರಾಷ್ಟ್ರೀಯ ಮ್ಯಾರಾಥಾನ್ ನಡೆದಿದ್ದು, ಈ ಮ್ಯಾರಾಥಾನ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ರಾಮು ಮಾಳಿಯವರು 21 ಕಿ.ಮೀ. ಅಂತರದ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ಮಲಿಕವಾಡ ಗ್ರಾಮದ ಮಹೇಶ್ ತೊಂಬರ 42 ಕಿ.ಮೀ. ಅಂತರದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಗೋವಾದಲ್ಲಿ ಯುವ ಕ್ರೀಡಾ ಅಭಿವೃದ್ಧಿ ಅಸೋಶಿಯೇಶನ್ ಇಂಡಿಯಾ ಮತ್ತು ಗೋವಾ ಅಸೋಶಿಯೇಶನ್ ವತಿಯಿಂದ ಏರ್ಪಡಿಸಿದ್ದ ಮ್ಯಾರಾಥಾನ್ನಲ್ಲಿ ಚಿಕ್ಕೋಡಿ ತಾಲೂಕಿನ ಮಲಿಕವಾಡ ಗ್ರಾಮದ ಮಹೇಶ ತೊಂಬರೆ ಹಾಗೂ ಯಕ್ಸಂಬಾ ಪಟ್ಟಣದ ರಾಮು ಮಾಳಿ ಇಬ್ಬರು ಯುವಕರು ಚಿನ್ನದ ಪದಕ ಪಡೆದಿದ್ದು, ನೇಪಾಳದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಾಂಪಿಯನ್ಶಿಪ್ ಸ್ಪರ್ಧೆಗಾಗಿ ಆಯ್ಕೆಯಾಗಿದ್ದರು. ನೇಪಾಳದಲ್ಲಿ ನಡೆದ ಮ್ಯಾರಾಥಾನ್ನಲ್ಲಿ ರಾಮು ಚಿನ್ನದ ಪದಕೆ ಪಡೆದುಕೊಂಡರೆ ಮಹೇಶ್ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಇಬ್ಬರೂ ಮಲಿಕವಾಡ ಗ್ರಾಮಕ್ಕೆ ಆಗಮಿಸಿದಾಗ ಅವರಿಗೆ ಸತ್ಕಾರ ಮಾಡುವ ಮೂಲಕ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.