– ಯೋಗಿ ಸರ್ಕಾರ ಇಡೀ ಪ್ರಪಂಚಕ್ಕೆ ಕಪ್ಪು ಚುಕ್ಕೆ
ಬೆಳಗಾವಿ: ಸುರೇಶ್ ಅಂಗಡಿ ಕೇಂದ್ರದ ಮಂತ್ರಿ. ಅಲ್ಲದೇ ಬೆಳಗಾವಿಯಲ್ಲಿ ಮಿಲಿಟರಿ ಬೇಸ್ ಇದೆ. ಆದರೂ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ತಂದು ಗೌರವ ಸಲ್ಲಿಸಲು ಕೇಂದ್ರ, ರಾಜ್ಯ ಸರ್ಕಾರಕ್ಕೆ ಆಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಸುರೇಶ್ ಅಂಗಡಿ ದೆಹಲಿಯಲ್ಲಿ ನಿಧನ ವಿಚಾರವಾಗಿ ನಗರದಲ್ಲಿ ಮಾತನಾಡಿದ ಡಿಕೆಶಿ, ಸುರೇಶ್ ಅಂಗಡಿಯವರ ಪಾರ್ಥಿವ ಶರೀರ ಬೆಳಗಾವಿಗೆ ತರಬೇಕಿತ್ತು. ಬೆಳಗಾವಿಯಲ್ಲಿ ಅಂತಿಮ ದರ್ಶನಕ್ಕೆ ಕ್ಷೇತ್ರದ ಜನರಿಗೆ ಅವಕಾಶ ಕೊಡಬಹುದಾಗಿತ್ತು. ಎರಡು ತಿಂಗಳ ಹಿಂದೆ ಏನೇನೂ ರಾಜಕಾರಣ ನಡೆಯಿತು ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ಆದರೆ ಈ ಸಂದರ್ಭದಲ್ಲಿ ನೊಂದ ಕುಟುಂಬಕ್ಕೆ ಸರ್ಕಾರ ನ್ಯಾಯ ಒದಗಿಸಲು ಆಗಲಿಲ್ಲ ಎಂದರು.
ಸುರೇಶ್ ಅಂಗಡಿ ಕೇಂದ್ರದ ಮಂತ್ರಿ. ಅಲ್ಲದೇ ಬೆಳಗಾವಿಯಲ್ಲಿ ಮಿಲಿಟರಿ ಬೇಸ್ ಇದೆ. ಆದರೂ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ತಂದು ಗೌರವ ಸಲ್ಲಿಸಲು ಕೇಂದ್ರ, ರಾಜ್ಯ ಸರ್ಕಾರಕ್ಕೆ ಆಗಲಿಲ್ಲ. ಹೀಗಾಗಿ ಈ ಕ್ಷೇತ್ರದ ಜನರು ಸುರೇಶ್ ಅಂಗಡಿಯವರ ಆತ್ಮ ಮತ್ತು ಅವರ ಕುಟುಂಬ ಈ ಬಗ್ಗೆ ನಿರ್ಧಾರ ಮಾಡಬೇಕು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹತ್ರಾಸ್ ಗ್ಯಾಂಗ್ರೇಪ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಯೋಗಿ ಆದಿತ್ಯನಾಥ್ ಸರ್ಕಾರ ಇಡೀ ದೇಶಕ್ಕೆ ರೋಗ ತಂದು ಕೊಡಲಿದೆ. ಯೋಗಿ ಆದಿತ್ಯನಾಥ್ ಸರ್ಕಾರ ಇಡೀ ನಮ್ಮ ದೇಶದ ಗೌರವ, ಸ್ವಾಭಿಮಾನ, ಸಮುದಾಯ ಎಲ್ಲರಿಗೂ ಇಡೀ ಪ್ರಪಂಚಕ್ಕೆ ಭಾರತದ ಬಗ್ಗೆ ಕಪ್ಪು ಚುಕ್ಕೆ. ಇಡೀ ಮನುಕುಲಕ್ಕೆ ಅವಮಾನವಾಗಿದೆ ಎಂದು ಡಿಕೆಶಿ ವಾಗ್ದಾಳಿ ಮಾಡಿದರು.
ಪ್ರವಾಹ ಸಂತ್ರಸ್ತರಿಗೆ ನ್ಯಾಯ ಕೊಡಲು ಸರ್ಕಾರಕ್ಕೆ ಆಗುತ್ತಿಲ್ಲ. ಬೆಳಗಾವಿಯಲ್ಲಿ ಇಷ್ಟು ಜನ ಸಚಿವರು, ಎಂಪಿಗಳು ಇದ್ದರೂ ನ್ಯಾಯ ಕೊಡಲು ಆಗಿಲ್ಲ. ಈ ಬಗ್ಗೆ ಬೆಳಗಾವಿ ಜಿಲ್ಲೆಯ ಜನರೇ ನಿರ್ಧರಿಸಬೇಕು ಎಂದರು. ಇನ್ನೂ ಇಂದು ಸಂಜೆ ಜಿಲ್ಲಾ ಕಾಂಗ್ರೆಸ್ ಕಮೀಟಿ ಜತೆ ಸಭೆ ಕರೆದಿದ್ದೇವೆ. ಎಲ್ಲರ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ ಎಂದು ಬೆಳಗಾವಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತನಾಡಿದರು.
ರಮೇಶ್ ಜಾರಕಿಹೊಳಿ ತವರು ಜಿಲ್ಲೆಯಲ್ಲಿ ಪ್ರಭಾವ ಬೀರಲು ಡಿಕೆಶಿ ಯತ್ನಿಸುತ್ತಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಗೆಲ್ಲಲು ಕಸರತ್ತು ಮಾಡುತ್ತಿದ್ದಾರೆ. ಬೆಳಗಾವಿಗೆ ಬಂದ ವೇಳೆಯೇ ನವದೆಹಲಿಯಲ್ಲಿ ಕೊರೊನಾದಿಂದ ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನ ವಿಚಾರವಾಗಿ ಮಾತನಾಡಿದ್ದಾರೆ. ಸುರೇಶ್ ಅಂಗಡಿ ಪಾರ್ಥಿವ ಶರೀರ ಬೆಳಗಾವಿಗೆ ತರದ ವಿಚಾರದ ಬಗ್ಗೆ ಡಿಕೆಶಿ ಪ್ರಸ್ತಾಪ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.