ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದೆ.
ಅಂಕೋಲಾ ತಾಲೂಕಿನ ಅಗಸೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆ.ಪಿ.ಎಸ್)ನ 7 ವಿದ್ಯಾರ್ಥಿಗಳು, 3 ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿದ್ದು, ಬಾವಿಕೇರಿ, ಕೃಷ್ಣಾಪುರದ ಶಾಲೆಯ ತಲಾ ಒಬ್ಬ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಅಗಸೂರಿನ ಶಿಕ್ಷಕಿಯ ಮೂಲಕ 7 ಜನ ವಿದ್ಯಾರ್ಥಿಗಳಿಗೆ ಹಾಗೂ ಒಟ್ಟು 5 ಜನ ಶಿಕ್ಷಕರಿಗೆ ಕೊರೊನಾ ಸೋಂಕು ತಗಲಿದೆ.
ಈ ಹಿನ್ನೆಲೆಯಲ್ಲಿ ಏಪ್ರಿಲ್ 1ರ ವರೆಗೆ ಅಂಕೋಲದ ಅಗಸೂರು ಶಾಲೆಯನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. 247 ಜನ ವಿದ್ಯಾರ್ಥಿಗಳು, 16 ಜನ ಶಿಕ್ಷಕರ ಗಂಟಲು ದ್ರವ ಪರೀಕ್ಷೆ ಗೆ ರವಾನೆ ಮಾಡಲಾಗಿದ್ದು, ಫಲಿತಾಂಶ ಇನ್ನಷ್ಟೇ ಬರಬೇಕಿದೆ.
ಸೋಂಕು ಪತ್ತೆಯಾದ ಶಾಲೆಗಳಿಗೆ ಶಿಕ್ಷಣ ಇಲಾಖೆ ಸ್ಯಾನಿಟೈಜ್ ವ್ಯವಸ್ಥೆ ಮಾಡಿದೆ. ಇದರ ಜೊತೆಗೆ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಶಿಕ್ಷಣಾಧಿಕಾರಿ ಹರೀಶ್ ಗಾಂವ್ಕರ್ ಸೂಚಿಸಿದ್ದಾರೆ.