Bengaluru City
ಸರ್ಕಾರದ ಭೂಸುಧಾರಣಾ ಕಾಯ್ದೆಯ ತಿದ್ದುಪಡಿಗೆ ಆರ್ಎಸ್ಎಸ್ ವಲಯದಲ್ಲಿ ಆಕ್ಷೇಪ

ಬೆಂಗಳೂರು: ಯಾರು ಬೇಕಾದರೂ ಕೃಷಿಭೂಮಿ ಖರೀದಿಸಬಹುದೆಂಬ ನಿಯಮವನ್ನು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಜಾರಿ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ಶಾಕಿಂಗ್ ನ್ಯೂಸ್. ಬಿಜೆಪಿ ಸರ್ಕಾರದ ಈ ನಿರ್ಧಾರಕ್ಕೆ ಆರ್ಎಸ್ಎಸ್ ಚಿಂತನೆಗಳಿಂದ ಪ್ರೇರಿತರಾಗಿರುವ ಇತರೇ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ಭಾರತೀಯ ಕಿಸಾನ್ ಸಂಘ, ಸ್ವದೇಶಿ ಜಾಗರಣ ಮಂಚ್ ಮತ್ತು ಕೃಷಿ ಪ್ರಯೋಗ ಪರಿವಾರಗಳಿಂದ ಕಾಯ್ದೆಯ ತಿದ್ದುಪಡಿಗೆ ಆಕ್ಷೇಪ ವ್ಯಕ್ತವಾಗಿದೆ. ಇಂದು ಸಂಜೆ ಸಿಎಂ ಯಡಿಯೂರಪ್ಪ ಭೇಟಿ ಮಾಡಿದ ಸಂಘಟನೆಗಳ ಮುಖ್ಯಸ್ಥರ ನಿಯೋಗ, ಭೂ ಸುಧಾರಣಾ ತಿದ್ದುಪಡಿ ಬಗ್ಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿದೆ.
ಭಾರತೀಯ ಕಿಸಾನ್ ಸಂಘ ದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಾಸರಘಟ್ಟ, ಸ್ವದೇಶಿ ಜಾಗರಣ ಮಂಚ್ ನ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಜಗದೀಶ್, ಅಖಿಲ ಭಾರತ ಸಂಯೋಜಕ್ ಪ್ರೊ.ಕುಮಾರಸ್ವಾಮಿ, ಕೃಷಿ ಪ್ರಯೋಗ ಪರಿವಾರದ ಅರುಣ ಮತ್ತು ವೃಷಾಂಕ್ ಭಟ್ ಇದ್ದ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಅವರ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿತ್ತು.
ಸಂಘಟನೆಗಳ ಒತ್ತಾಯ ಮತ್ತು ಆಕ್ಷೇಪಣೆಗಳೇನು?
1. 79 ಎ, ಬಿ ತಿದ್ದುಪಡಿ ಮೂಲಕ ರೈತರಲ್ಲದವರಿಗೆ ಕೃಷಿ ಭೂಮಿ ಖರೀದಿಸಲು ಅವಕಾಶ ಕೊಡುವುದು, ಸ್ವಾಗತಾರ್ಹ. ಕೃಷಿಗೆ ಹೆಸರು, ವಿದ್ಯಾವಂತರು ಬರುವುದು ಒಳ್ಳೆಯದೇ ಆದರೆ ಹಾಗೆ ಕೃಷಿ ಭೂಮಿ ಪಡೆದವರು ಅಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಯನ್ನು ಮಾಡಬೇಕು ಕೈಗಾರಿಕಾ ಉದ್ದೇಶಕ್ಕೆ ಈ ಭೂಮಿಯನ್ನು ಬಳಸಬಾರದು ಮತ್ತು ಮುಂದೆ ಸದರಿ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಮಾರುವ ಅವಕಾಶವೂ ಇರಬಾರದು ಎಂಬುದು ಆಗ್ರಹ.
2. ಆದರೆ ಸರ್ಕಾರದ ಈ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಕೈಗಾರಿಕೆಗಳಿಗೆ, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪೂರಕವಾಗಿದೆ ಎಂಬ ವಾದ ಕೇಳಿಬರುತ್ತಿದೆ. ಸರ್ಕಾರ ರೈತರ ಪರವಾಗಿ ಸ್ಪಷ್ಟ ನಿಲುವು ಪ್ರಕಟಿಸದಿರುವುದು ಆತಂಕಕ್ಕೆ ಕಾರಣವಾಗಿದೆ.
3. ಹೀಗಾಗಿ ಕಾಯ್ದೆಗೆ ತಿದ್ದುಪಡಿ ತರುವ ಮೊದಲು ನೀವು ರೈತ ಸಂಘಟನೆಗಳೊಂದಿಗೆ ಚರ್ಚಿಸಬೇಕು. ವಿಷಯ ಪರಿಣಿತರ ಸಮಿತಿ ರಚಿಸಿ ಸಲಹೆ ಪಡೆಯಬೇಕು.
4 ಹೊಸದಾಗಿ ಕೃಷಿ ಭೂಮಿ ಖರೀದಿಸುವರಿಗೆ ಗರಿಷ್ಠ ಮಿತಿಯನ್ನು ಹಿಂದಿನಂತೆಯೇ 54 ಎಕರೆಗೆ ಮುಂದುವರಿಸುವುದು ಮತ್ತು ಹೊಸದಾಗಿ ಕೃಷಿ ಭೂಮಿ ಖರೀದಿಸಿದರು ಕನಿಷ್ಠ 8 ವರ್ಷ ಮಾರುವಂತಿಲ್ಲ ಎಂಬ ಷರತ್ತಿರಲಿ.
5, ಕೃಷಿ ಭೂಮಿಯಲ್ಲಿ ಇಂತಹ ಕೃಷಿ ಪೂರಕ ಘಟಕಗಳನ್ನು ನಿರ್ಮಿಸಲು ಕಂದಾಯ ಇಲಾಖೆಯ ಅನುಮತಿಯ ಅಗತ್ಯ ಇರಕೂಡದು. ರೈತರಿಗೆ ಮನೆ, ಕೊಟ್ಟಿಗೆ, ಕೃಷಿ ಸಂಸ್ಕರಣಾ ಘಟಕ, ಗೋದಾಮು, ಹೋಮ್ ಸ್ಟೇ, ಒಂದು ಎಕರೆಗಿಂತ ಹೆಚ್ಚಿನ ಜಾಗದಲ್ಲಿ ಘಟಕಗಳು ಬಂದಲ್ಲಿ ತಹಶೀಲ್ದಾರ್ ಅಥವಾ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯ ಎಂದು ನಮೂದಿಸಬೇಕು.
6 ಟ್ರಸ್ಟ್, ಕಂಪನಿ, ರಾಜ್ಯದ ಕೇಂದ್ರದ ಬಹುರಾಜ್ಯ ಸಹಕಾರಿ ಕಾಯ್ದೆಗಳಲ್ಲಿ ನೋಂದಣಿ ಮಾಡುವ ಸಂಸ್ಥೆಗಳು ರೈತರಿಂದ ಭೂಮಿ ಖರೀದಿಸುವಾಗ ಖರೀದಿಸುವವರ ಪೂರ್ತಿ ವಿವರ ಮತ್ತು ಖರೀದಿಸುವ ಉದ್ದೇಶ ಮಾರುವ ರೈತರಿಗೆ ತಿಳಿಯುವಂತಾಗಬೇಕು.
6 ಪ್ಲಾನೇಷನ್ ಕಾಯ್ದೆ ಅಡಿಯಲ್ಲಿ ಸಾವಿರಾರು ಎಕರೆ ಭೂಮಿ ಹೊಂದಲು ಅವಕಾಶವಿದೆ. ಈ ಕಾಯ್ದೆಯನ್ನು ಮರುಪರಿಶೀಲಿಸಬೇಕು.
8 ನೀರಾವರಿ ಕಲ್ಪಿಸಲಾಗಿದೆ ಸರ್ಕಾರ ಸಾವಿರಾರು ಕೋಟಿ ಹಣ ಖರ್ಚು ಮಾಡಿದೆ. ಈಗ ಅದೆ ನೀರಾವರಿ ಭೂಮಿಯನ್ನು ಕೈಗಾರಿಕೆಗೆ ನೀಡುವ ಬಗ್ಗೆ ಬಿಗಿ ನೀತಿ ಬೇಕು.
9. ಭೂ ಸುಧಾರಣಾ ಕಾಯಿಯಲ್ಲಿ ತರುವ ಮಾರ್ಪಾಡುಗಳನ್ನು ಪುರ್ವಾನ್ವಯದಿಂದ ಜಾರಿಗೊಳಿಸುವುದು ಬೇಡ. ಹೀಗೆ ಮಾಡುವುದರಿಂದ ಸರ್ಕಾರ ಹೊಸಬರನ್ನು ಕೃಷಿ ಕ್ಷೇತ್ರಕ್ಕೆ ಹಿತ ರಕ್ಷಣೆಗೆ ಬದ್ಧವಾಗಿದೆ ಎಂಬ ಸಂದೇಶ ಸಮಾಜಕ್ಕೆ ಹೋಗುತ್ತದೆ.
