ಮಡಿಕೇರಿ: ಸಚಿವ ಸ್ಥಾನ ಸಿಗದ ಹಿರಿಯ ಶಾಸಕರಿಗೆ ಅಸಮಾಧಾನ ಇದ್ದೇ ಇರುತ್ತದೆ. ಮೊದಲ ಬಾರಿ ಶಾಸಕನಾದವನಿಗೆ ಸಚಿವ ಸ್ಥಾನ ಸಿಗುತ್ತದೆ. ಹೀಗಿರುವಾಗ ಐದೈದು ಬಾರಿ ಎಂಎಲ್ಎಗಳಾಗಿರುವ ನಮಗೆ ಸಚಿವ ಸ್ಥಾನದ ಆಕಾಂಕ್ಷೆ ಇರೋದಿಲ್ಲವೇ ಎಂದು ಪ್ರಶ್ನಿಸುವ ಮೂಲಕ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ನಾನು ಆಕಾಂಕ್ಷಿ ಎನ್ನುವುದನ್ನು ಹೇಳಿದ್ದಾರೆ.
ನಾನೂ ಕೂಡ ಸಚಿವ ಆಕಾಂಕ್ಷಿಯೇ. ಲಾಬಿ ಮಾಡದೇ ಇದ್ದರೆ ಸಚಿವ ಸ್ಥಾನ ಸಿಗುವುದಿಲ್ಲ. ಸಚಿವಸ್ಥಾನ, ಅಧಿಕಾರಿ ಸಿಗಬೇಕಾದರೆ ಲಾಬಿ ಮಾಡಲೇಬೇಕು. ಅಷ್ಟಕ್ಕೂ ಲಾಬಿ ಮಾಡುವುದು ಪಕ್ಷ ವಿರೋಧಿ ಚಟುವಟಿಕೆ ಅಲ್ಲ ಎಂದು ಅವರು ಸಮರ್ಥಿಸಿಕೊಂಡರು. ನಾನು ಕತ್ತಿಯವರೊಂದಿಗಾಗಲಿ ಬೇರೆ ಯಾರೊಂದಿಗೂ ಗುರುತಿಸಿಕೊಂಡಿಲ್ಲ. ಪ್ರತ್ಯೇಕ ಯಾವ ಸಭೆಯನ್ನು ನಡೆಸಿಲ್ಲ. ಆದರೆ ಸಚಿವ ಸಂಪುಟ ವಿಸ್ತರಣೆ ಮಾಡುವಾಗ ರಾಜ್ಯಾಧ್ಯಕ್ಷರು, ಸಿಎಂ ಇವರನ್ನು ನಾನೂ ನೇರವಾಗಿ ಭೇಟಿ ಮಾಡಿ ಲಾಬಿ ಮಾಡುತ್ತೇನೆ ಎಂದು ಹೇಳಿದರು.
ಸದ್ಯ ದೇಶದಲ್ಲಿ ಕೊರೊನಾ ಸಮಸ್ಯೆ ಇರುವುದರಿಂದ ಸರ್ಕಾರ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುತ್ತದೆ. ಹೀಗಾಗಿ ನಾವು ಸುಮ್ಮನಾಗಿದ್ದೇನೆ. ಮುಂದೆ ನಾನೂ ಕೂಡ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತೇನೆ ಎಂದು ನೇರವಾಗಿ ಹೇಳಿದರು.