ಬೆಂಗಳೂರು: ತಂದೆ-ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಶ್ರೀರಂಗಪಟ್ಟಣದ ಬಳಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಈತ ತನ್ನ ಪೋಷಕರನ್ನು ಕೊಲೆ ಮಾಡಿದ ಬಳಿಕ ಸೇತುವೆ ಮೇಲಿಂದ ಹಾರಿದ್ದ. ತಂದೆ-ತಾಯಿಗೆ ಪಿಂಡ ಬಿಟ್ಟು ತಲೆ ಬೋಳಿಸಿಕೊಂಡು ಬಳಿಕ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದನು. ಆದರೆ ಈ ವೇಳೆ ಆತನ ಪ್ರಾಣ ಹೊಗದೆ ಎರಡು ಕಾಲು ಮುರಿದಿತ್ತು. ಹೀಗಾಗಿ ತನ್ನ ಸಂಬಂಧಿಕರಿಗೆ ಫೋನ್ ಮಾಡಿದ್ದು, ಅವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.
ನಡೆದಿದ್ದೇನು?:
ಆರೋಪಿ ಸಂತೋಷ್ ಬುಧವಾರ ತನ್ನ ಹೆತ್ತವರಾದ ನರಸಿಂಹ ರಾಜು(70) ಹಾಗೂ ಸರಸ್ವತಿ (64) ಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದನು. ಈ ಘಟನೆ ಕಾಮಾಕ್ಷಿಪಾಳ್ಯದ ರಂಗನಾಥ ಪುರದಲ್ಲಿ ನಡೆದಿತ್ತು. ಹೆತ್ತವರನ್ನು ಕೊಲೆ ಮಾಡಿದ ಬಳಿಕ ಸಂತೋಷ್ ನಾಪತ್ತೆಯಾಗಿದ್ದನು. ಈ ಹಿನ್ನೆಲೆಯಲ್ಲಿ ಪೊಲೀಸರು ಮಗನ ಮೇಲೆ ಸಂಶಯ ವ್ಯಕ್ತಪಡಿಸಿದ್ದರು.
ದಂಪತಿ ಮೂಲತಃ ಮೈಸೂರಿನವರಾಗಿದ್ದು, ಮಗ ಹಾಗೂ ಸೊಸೆ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಮನೆ ಕೆಲಸದವರು ಬುಧವಾರ ಬೆಳಗ್ಗೆ ಬಂದಾಗ ರಾಜು ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಪಕ್ಕದ ಕೋಣೆಯಲ್ಲಿ ಸರಸ್ವತಿ ಮೃತದೇಹ ಬಿದ್ದಿತ್ತು. ಇದನ್ನು ಕಂಡು ಗಾಬರಿಗೊಂಡ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕೊಲೆಯ ಹಿಂದಿನ ರಹಸ್ಯ ಭೇದಿಸಲು ಮುಂದಾಗಿದ್ದಾರೆ.
ಇತ್ತ ನೆರೆಹೊರೆಯವರು, ತಿಂಗಳ ಹಿಂದೆಯಷ್ಟೇ ಮಗ ತನ್ನ ವೃದ್ಧ ಪೋಷಕರ ಜೊತೆ ಜಗಳವಾಡಿದ್ದನು. ಅಲ್ಲದೆ ಅವರ ಮೇಲೆ ಹಲ್ಲೆಗೂ ಮುಂದಾಗಿದ್ದನು. ಈ ಹಿನ್ನೆಲೆಯಲ್ಲಿ ಆತನೇ ಕೊಲೆ ಮಾಡಿರಬಹುದೆಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮದುವೆ ದಲ್ಲಾಳಿಯಾಗಿ ಮೃತ ರಾಜು ಕೆಲಸ ಮಾಡುತ್ತಿದ್ದರೆ, ಸರಸ್ವತಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗೆ ಇಬ್ಬರೂ ಕೆಲಸ ಬಿಟ್ಟಿದ್ದರು. ಇತ್ತ ಆರೋಪಿ ಸಂತೋಷ್ ಪತ್ನಿ ಗರ್ಭಿಣಿಯಾಗಿದ್ದು, ತವರಲ್ಲಿ ಹೋಗಿ ನೆಲೆಸಿದ್ದಳು.