ಚಿಕ್ಕಮಗಳೂರು: ಇವತ್ತು ಲಾಕ್ಡೌನ್ ಅಂತ ಗೊತ್ತಿದ್ದರೂ ಸ್ನೇಹಿತರು-ಸಂಬಂಧಿಕರ ಜೊತೆ ಊರೂರು ಸುತ್ತುತ್ತಾ ಪ್ರವಾಸಕ್ಕೆ ಬಂದಿದ್ದ ಹೊರಜಿಲ್ಲೆಯ ಪ್ರವಾಸಿಗರು ಹಾಗೂ ಜನಸಾಮಾನ್ಯರಿಗೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸರು ನೀರಿಳಿಸಿದ್ದಾರೆ.
ಲಾಕ್ಡೌನ್ ಹಿನ್ನೆಲಯಲ್ಲಿ ಮೂಡಿಗೆರೆ ತಾಲೂಕಿನ ಬಣಕಲ್, ಕೊಟ್ಟಿಗೆಹಾರದಲ್ಲೂ ಅಂಗಡಿ-ಮುಂಗಟ್ಟುಗಳನ್ನ ಸಂಪೂರ್ಣ ಬಂದ್ ಮಾಡಿ ಯಾರೂ ಮನೆಯಿಂದ ಹೊರಬಂದಿರಲಿಲ್ಲ. ಬಣಕಲ್ ಪೊಲೀಸರು ಕೂಡ ಬೆಳಗ್ಗೆಯಿಂದ ಗಸ್ತು ತಿರುಗುತ್ತಿದ್ದು ಅನಾವಶ್ಯಕವಾಗಿ ರೋಡಲ್ಲಿ ತಿರುಗಾಡುತ್ತಿದ್ದವರಿಗೆ ಚಳಿ ಬಿಡಿಸಿ ಮನೆಗೆ ಕಳಿಸಿದ್ದರು.
ಬೆಳಗ್ಗೆ 10 ಗಂಟೆ ಸುಮಾರಿಗೆ ಪ್ರವಾಸಿಗರು ಹಾಗೂ ಹೊರಜಿಲ್ಲೆಗೆ ಹೋಗುವವರ ಕಾಟ ಆರಂಭವಾಗಿದೆ. ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರಿಗೆ ಸಂಪರ್ಕ ಕಲ್ಪಿಸುವ ಕೊಟ್ಟಿಗೆಹಾರದಲ್ಲಿ ಪ್ರವಾಸಿಗರು ಹಾಗೂ ಬೆಂಗಳೂರು, ದಾವಣಗೆರೆ, ಮಂಗಳೂರು, ಚಿತ್ರದುರ್ಗ, ಉಡುಪಿ ಮುಂತಾದ ಭಾಗಗಳಿಂದ ಬಂದ ಜನರನ್ನು ಪೊಲೀಸರು ಅಡ್ಡಗಟ್ಟಿದ್ದಾರೆ.
ಹೊರಜಿಲ್ಲೆಗಳಿಂದ ಬಂದ ಪ್ರವಾಸಿಗರಿಗೆ ಪೊಲೀಸರು ಕೊಟ್ಟಿಗೆಹಾರದಲ್ಲಿ ಪ್ರವಾಸಿ ತಾಣಗಳ ದರ್ಶನ ಮಾಡಿಸಿದ್ದಾರೆ. ಮಂಗಳೂರು ಕಡೆಯಿಂದಲೂ ಹಲವು ವಾಹನಗಳು ಬಂದಿದ್ದು ಕೊಟ್ಟಿಗೆಹಾರ ಚೆಕ್ಪೋಸ್ಟ್ನಲ್ಲಿ ಯಾರನ್ನೂ ಬಿಡದೆ ಪೊಲೀಸರು ಅಡ್ಡಗಟ್ಟಿದ್ದರು.
ಸುಮಾರು ಒಂದು ಗಂಟೆಯ ಬಳಿಕ ಎಲ್ಲರಿಗೂ ವಾರ್ನ್ ಮಾಡಿ ಬಿಟ್ಟಿದ್ದಾರೆ. ಆದರೆ, ಮಂಗಳೂರಿನಿಂದ ಬಂದ ಅವರಿಗೆ ಮಾರ್ಗ ಮಧ್ಯೆ ಪೊಲೀಸರು ಫೈನ್ ಹಾಕಿ ಬಿಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ ಬಣಕಲ್ ಪೊಲೀಸರು ಎಲ್ಲರಿಗೂ ಕಾಯಿಸಿ, ಎಚ್ಚರಿಕೆ ನೀಡಿದ್ದಾರೆ.
ಲಾಕ್ಡೌನ್ ಕಾನೂನನ್ನ ಉಲ್ಲಂಘಿಸಿ ಬಂದ ನೂರಾರು ವಾಹನಗಳು ಕೊಟ್ಟಿಗೆಹಾರದಲ್ಲಿ ಸಾಲಾಗಿ ನಿಂತಿದ್ದು, ಅಗತ್ಯ ವಸ್ತುಗಳನ್ನ ಸಾಗಿಸುವ ವಾಹನಗಳ ಓಡಾಟಕ್ಕೆ ತೊಂದರೆಯೂ ಆಗಿತ್ತು. ತದನಂತರ ಬಣಕಲ್ ಪೊಲೀಸರು ಎಲ್ಲರಿಗೂ ಎಚ್ಚರಿಸಿ ಬಿಟ್ಟಿದ್ದಾರೆ.