ಬೆಂಗಳೂರು: ರಾಜ್ಯಕ್ಕೆ ಲಸಿಕೆ ಯಾವಾಗ ಬರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ನಾವು ಆರ್ಡರ್ ಮಾಡಿದ್ದೇವೆ. ಉತ್ಪಾದಿಸುವವರು ನಮಗೆ ಕೊಡಬೇಕು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಉಚಿತವಾಗಿ ಲಸಿಕೆ ಕೊಡುತ್ತಿದೆ. ಅದರಲ್ಲಿಯೂ 18-45 ವರ್ಷ ಒಳಗಿನವರಿಗೆ ರಾಜ್ಯ ಸರ್ಕಾರವೇ ಲಸಿಕೆ ಖರೀದಿ ಮಾಡಿ ಎರಡು ಫೇಸ್ ಲ್ಲಿ ಲಸಿಕೆ ಹಾಕುತ್ತಿದೆ. ನಾವು ಮೂರು ಕೋಟಿ ಲಸಿಕೆ ಆರ್ಡರ್ ಮಾಡಿದ್ದೇವೆ. ಅದರಲ್ಲಿ ನಮಗೆ ಒಂದು ಕೋಟಿ ಲಸಿಕೆ ಬಂದಿದೆ ಎಂದು ತಿಳಿಸಿದ್ದಾರೆ.
86 ಲಕ್ಷ ಜನರಿಗೆ ಫಸ್ಟ್ ಡೋಸ್ನನ್ನು ನೀಡಿದ್ದು, ಇದರಲ್ಲಿ 25 ಲಕ್ಷ ಜನಕ್ಕೆ ಎರಡನೇ ಡೋಸ್ ನೀಡಿದ್ದೇವೆ. ಆದರೆ ಇನ್ನೂ 60 ಲಕ್ಷ ಜನರಿಗೆ ಸೆಕೆಂಡ್ ಡೋಸ್ ನೀಡಬೇಕಾಗಿದೆ. ಸೆಕೆಂಡ್ ಡೋಸ್ ಕಡಿಮೆ ಆಗುತ್ತಿರುವುದರ ಬಗ್ಗೆ ಈಗಾಗಲೇ ಕೇಂದ್ರದ ಗಮನಕ್ಕೆ ತಂದಿದ್ದೇವೆ. ಸಕಾಲದಲ್ಲಿ ಲಸಿಕೆ ಸಿಗದಿದ್ದರೆ ಏನು ಮಾಡುವುದು. ಅವರ ಪರಿಸ್ಥಿತಿ ಏನು ಪರಿಹಾರ ಏನು ಎಂದು ಕೇಳಿದ್ದೇವೆ. ಕೇಂದ್ರ ಏನು ಹೇಳುತ್ತದೆ ಎಂಬುವುದನ್ನು ಕಾದುನೋಡಬೇಕಾಗಿದೆ ಎಂದಿದ್ದಾರೆ.
ಲಸಿಕೆ ಯಾವಾಗ ರಾಜ್ಯಕ್ಕೆ ಬರುತ್ತದೆ ಎಂಬ ಪ್ರಶ್ನೆಗೆ, ಲಸಿಕೆ ಯಾವಾಗ ಬರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ನಾವು ಆರ್ಡರ್ ಮಾಡಿದ್ದೇವೆ. ಉತ್ಪಾದಿಸುವವರು ನಮಗೆ ಕೊಡಬೇಕು. ಲಸಿಕೆ ಬರಲು ದಿನ ಅಲ್ಲ. ತಿಂಗಳು ಗಟ್ಟಲೆ ಆಗಬಹುದು. ನಾವು ಕಾಯುತ್ತಿದ್ದೇವೆ. ಜನವರಿ 16 ರಿಂದ ಲಸಿಕೆ ಹಾಕಲು ಶುರು ಮಾಡಿ ಮೇಗೆ ನಾಲ್ಕು ತಿಂಗಳಾಗಿದೆ. ನಾಲ್ಕು ತಿಂಗಳಲ್ಲಿ ಬಂದಿರುವುದು ಒಂದು ಕೋಟಿ ಡೋಸ್. ಆದರೆ ಇನ್ನೂ ಆರೂವರೆ ಕೋಟಿ ಡೋಸ್ ಬೇಕು. ಎಲ್ಲರಿಗೂ ಎರಡು ಡೋಸ್ ಹಾಕಬೇಕು. ಲಸಿಕೆ ಯಾವಾಗ ಬರುತ್ತದೆ ಎಂದು ನಾನಂತು ಹೇಳುವುದಕ್ಕೆ ಆಗುವುದಿಲ್ಲ. ಇದು ಉತ್ಪಾದನೆ ಮೇಲೆ ಅವಲಂಬಿತವಾಗಿದೆ ಅಸಹಾಯಕತೆಯಿಂದ ನುಡಿದರು.
ಮಾರ್ಚ್ ಮತ್ತು ಫೆಬ್ರವರಿಯಲ್ಲಿ ಜನರನ್ನು ಮನೆಗೆ ಹೋಗಿ ಕರೆದುಕೊಂಡು ಬರ್ತಿದ್ದೇವು. ಈಗ ಅವರೇ ಸ್ವಯಂ ಪ್ರೇರಿತರಾಗಿ ಲಸಿಕೆ ಹಾಕಿಸಿಕೊಳ್ಳಲು ಬರುತ್ತಿದ್ದಾರೆ. ಒಟ್ಟು 6.5 ಕೋಟಿ ಲಸಿಕೆ ಬೇಕಾಗಿದೆ. ನಾವು ಮೂರು ಕೋಟಿ ಆರ್ಡರ್ ಮಾಡಿದ್ದೇವೆ. ಲಸಿಕೆ ಬಂದ ನಂತರ ಕೊಡುತ್ತೇವೆ. ಅದರಲ್ಲಿಯೂ ಮೊದಲ ಆದ್ಯತೆ ಸೆಕೆಂಡ್ ಡೋಸ್ ಪಡೆಯುವವರಿಗೆ ನೀಡಲಾಗುತ್ತದೆ. ನಮ್ಮ ಕೈಯಲ್ಲಿ ಏನಿದೆ ಆ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಆಕ್ಸಿಜನ್ ಸಪ್ಲೈ ಸಮಸ್ಯೆ ಇಲ್ಲ ಎಂದು ಹೇಳಲ್ಲ. ಕೇಂದ್ರ ಸರ್ಕಾರ ಸಹಾಯ ಮಾಡಿದೆ. ಇನ್ನಷ್ಟು ಆಕ್ಸಿಜನ್ ಬೇಕು. ಇರೋದರಲ್ಲಿ ಮ್ಯಾನೇಜ್ ಮಾಡ್ತಿದ್ದೇವೆ. ಆಕ್ಸಿಜನ್ ಕಂಟೈನರ್ಗಳನ್ನ ಕೇಂದ್ರ ನಮಗೆ ಕಳಿಸಿಕೊಟ್ಟಿದೆ. ಕೋಲಾರ ಮತ್ತು ಕಲ್ಬುರ್ಗಿಯಲ್ಲಿ ಇದನ್ನ ಉಪಯೋಗಿಸಿಕೊಳ್ಳುತ್ತೀದ್ದೇವೆ ಎಂದು ಹೇಳಿದರು.
ಜಿಲ್ಲೆಗಳಲ್ಲಿ ಹೆಚ್ಚುವರಿ ಆಕ್ಸಿಜನ್ ಬೆಡ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ, ಆಕ್ಸಿಜನ್ ಇಲ್ಲದೇ ವೆಂಟಿಲೇಟರ್ ಸೌಲಭ್ಯ ಇಲ್ಲದೇ ಆಕ್ಸಿಜನ್ ಬೆಡ್ ಎಂದು ಹೇಳಬೇಡಿ ಎಂದು ಹೇಳಿದ್ದೇನೆ. ಆಕ್ಸಿಜನ್ ಸೇರಿದಂತೆ ಸಂಪೂರ್ಣ ಸೌಲಭ್ಯ ಇದ್ದರೆ ಮಾತ್ರ ಆಕ್ಸಿಜನ್ ಬೆಡ್ ಆಗುತ್ತೆ. ನಾರ್ಮಲ್ ಬೆಡ್ಗೆ ಆಕ್ಸಿಜನ್ ಕೊಟ್ಟು ಅದನ್ನ ಆಕ್ಸಿಜನ್ ಬೆಡ್ ಎಂದು ಹೇಳಕ್ಕೆ ಆಗುವುದಿಲ್ಲ ಎಂದು ತಿಳಿಸಿದರು.
ಒಡಿಶಾ ಮತ್ತು ವಿಶಾಖಪಟ್ಟಣದಿಂದ ನಾವು ಆಕ್ಸಿಜನ್ ತರಿಸಿಕೊಳ್ಳಬಹುದು. ಆದರೆ ಸಾಗಾಣಿಕೆ ಕಷ್ಟ ಎಂದು ವಿದೇಶದಿಂದ ಕೇಂದ್ರ ನಮಗೆ ಸಹಾಯ ಮಾಡಿದೆ. ಬಹರೇನ್ ನಿಂದ ಬಂದ ಆಕ್ಸಿಜನ್ ಕಂಟೈನರ್ ಗಳನ್ನ ಕೇಂದ್ರ ನೀಡಿದೆ. ರಾಜ್ಯಕ್ಕೆ ಇನ್ನಷ್ಟು ಆಕ್ಸಿಜನ್ ಬೇಕಿದೆ ಎಂದು ರವಿಕುಮಾರ್ ತಿಳಿಸಿದರು.