– ನಿನ್ನೆ, ಮೊನ್ನೆ ನಡೆದಿದ್ದೇನು ಅನ್ನೋದು ಗೊತ್ತಾಗಬೇಕು
ಕೋಲಾರ: ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಯಾವ ಕಾರಣಕ್ಕೆ ಸಿಡಿ ಕೇಸ್ ವಾಪಸ್ ಪಡೆದುಕೊಂದ್ದಾರೆ ಎಂದು ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿನೇಶ್ ಕಲ್ಲಹಳ್ಳಿ ಯಾವ ಕಾರಣಕ್ಕೆ ಕೇಸ್ ವಾಪಸ್ಸು ಪಡೆದುಕೊಂದ್ದಾರೆ ಎಂದು ಗೊತ್ತಿಲ್ಲ. ಯಾವ ಕಾರಣಕ್ಕೆ ಕೇಸ್ ಹಾಕಿದ್ದಾರೆಂದು ಕೂಡ ಗೊತ್ತಿಲ್ಲ. ಪ್ರಕರಣದ ಬಗ್ಗೆ ಸರ್ಕಾರಕ್ಕೆ ಜವಾಬ್ದಾರಿ ಇದೆ. ಸರ್ಕಾರವೇ ಈ ಪ್ರಕರಣದಲ್ಲಿ ಸುಮೋಟೋ ಕೇಸ್ ದಾಖಲಿಸಬಹುದು. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಅಸಹ್ಯಕರವಾದ ಘಟನೆಗಳು ನಡೆಯುತ್ತಿವೆ. ಸರ್ಕಾರ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜನತೆಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದರು.
ಕೇಸ್ ವಾಪಸ್ಸು ತೆಗೆದುಕೊಳ್ಳುವುದಕ್ಕೆ ಯಾರು ಪ್ರೇರಣೆ ಮಾಡಿದರು, ನಿನ್ನೆ ಮೊನ್ನೆ ರಾತ್ರಿ ಏನೇನು ನಡೆದಿದೆ. ಅದಲ್ಲೆವನ್ನು ತಿಳಿದುಕೊಳ್ಳಬೇಕು. ಇಲ್ಲಿಯವರೆಗೂ ಸಂತ್ರಸ್ಥ ಮಹಿಳೆ ಅನ್ಯಾಯವಾಗಿದೆ ಎಂದು ಯಾವತ್ತು ಹೊರಗಡೆ ಬಂದಿಲ್ಲ. ಯಾವ ಕಾರಣಕ್ಕೆ ಈ ಪ್ರಕರಣ ಹೊರ ಬಂದಿದೆ, ಇದರ ಸತ್ಯಾಂಶತೆ ಕುರಿತು ಜನರ ಮುಂದಿಡಬೇಕು ಎಂದು ಹೇಳಿದರು.
ಇದೇ ವೇಳೆ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು. ಯೋಗೇಶ್ವರ್ ಗ್ರಾಫಿಕ್ಸ್ ನಲ್ಲಿ ಎಕ್ಸ್ಪರ್ಟ್ ಇದ್ದಾರೆ, ಅವರಿಗೆ ಅನುಭವ ಇರುವುದರಿಂದ ಈ ಹೇಳಿಕೆ ಕೊಟ್ಟಿದ್ದಾರೆ. ಇದಕ್ಕೆ ನನ್ನ ಉತ್ತರ ಅನವಶ್ಯಕ ಎಂದು ಮಾತಿನ ಚಾಟಿ ಬೀಸಿದರು.