ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಯುವಕನೊಬ್ಬ ಯು.ಎ.ಇನಿಂದ ಮಾಸ್ಕ್ ನಲ್ಲಿ ಚಿನ್ನ ಸಾಗಾಟ ಮಾಡಿ ಸಿಕ್ಕಿಬಿದ್ದ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ಅರಬ್ ರಾಷ್ಟ್ರಗಳೊಂದಿಗೆ ಔದ್ಯೋಗಿಕ ಹಾಗೂ ವ್ಯವಹಾರಿಕ ಸಂಬಂಧಗಳಿವೆ. ಇಲ್ಲಿನ ಯುವಕರು ದುಡಿಮೆಗಾಗಿ ಅರಬ್ ರಾಷ್ಟ್ರಗಳಿಗೆ ತೆರಳುವುದು ಸಾಮಾನ್ಯವಾಗಿದೆ. ಹಾಗೆಯೇ ಅರಬ್ ರಾಷ್ಟ್ರಗಳಲ್ಲಿ ಸಿಗುವ ಅಗ್ಗದ ಚಿನ್ನವನ್ನು ಕಷ್ಟಮ್ ಅಧಿಕಾರಿಗಳ ಕಣ್ಣು ತಪ್ಪಿಸಿ ಇಲ್ಲಿಗೆ ಅಕ್ರಮವಾಗಿ ತರುವ ಮೂಲಕ ಇಲ್ಲಿನ ಮೌಲ್ಯದಲ್ಲಿ ಮಾರಾಟ ಮಾಡುತ್ತಾರೆ.
ಹಣದ ಆಸೆಗಾಗಿ ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡಲು ಅನೇಕರು ವಿವಿಧ ರೀತಿಯ ಪ್ರಯತ್ನ ನಡೆಸುತ್ತಾರೆ. ಈ ಹಿಂದೆ ಅಲಂಕಾರಿಕ ರಿಬ್ಬನ್, ಕುಕ್ಕರ್, ಅಡಾಪ್ಟರ್ ಗಳು ಮತ್ತು ಮಿಕ್ಸರ್ ಮೋಟರ್ಗಳಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ್ದ ಹಲವರನ್ನು ಬಂಧಿಸಿರುವ ಪ್ರಕರಣಗಳು ನಡೆದಿವೆ. ಪ್ಯಾಂಟ್ ನ ಸೊಂಟದ ಭಾಗದಲ್ಲಿ, ಬೂಟುಗಳ ಒಳಭಾಗದಲ್ಲಿ ಚಿನ್ನವನ್ನಿಟ್ಟುಕೊಂಡು ಸಾಗಿಸಲು ಯತ್ನಿಸಿರುವುದೂ ಇದೆ.
ಆದರೆ ಕೊರೊನಾ ಸೋಂಕು ಬಾರದಂತೆ ರಕ್ಷಣೆಗೆ ಬಳಸುವ ಮಾಸ್ಕ್ನಲ್ಲಿ ಚಿನ್ನ ಇಟ್ಟು ಸಾಗಿಸಿದ ಭಟ್ಕಳದ ಅಮರ್ ಎಂಬಾತನನ್ನು ಇದೀಗ ಕೇರಳದ ಕರಿಪುರಂ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ.
ಯುಎಇನಿಂದ ಮಾಸ್ಕ್ ನಲ್ಲಿ 2ಲಕ್ಷ ಮೌಲ್ಯದ 40 ಗ್ರಾಂ ಚಿನ್ನ ಅಡಗಿಸಿ ಅಲ್ಲಿನ ಏರ್ಪೋರ್ಟ್ ಅಧಿಕಾರಿಗಳಿಗೆ ಯಾಮಾರಿಸಿ ಕೇರಳದ ಕರಿಪುರಂ ವಿಮಾನ ನಿಲ್ದಾದಲ್ಲಿ ಇಳಿದಿದ್ದ. ಈತನ ಮೇಲೆ ಅನುಮಾನಗೊಂಡು ಕೋಯ್ಕ್ಕೋಡ್ ಏರ್ ಇಂಟಲಿಜೆನ್ಸಿ, ಕ್ಯಾಲಿಕಟ್ ಯುನಿಟ್, ಕೊಚ್ಚಿನ್ ಕಸ್ಟಮ್ಸ್ ಪ್ರಿವೆಂಟಿವ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ಈತನ ಮಾಸ್ಕ್ ಅಸಲಿಯತ್ತು ಬೆಳಕಿಗೆ ಬಂದಿದ್ದು ಈತನನ್ನು ಬಂಧಿಸಿದ್ದಾರೆ.