ಮಂಗಳೂರು: ಮಳೆ ನೀರು ಹರಿದು ಹೋಗುವ ಮ್ಯಾನ್ಹೋಲ್ ಚೇಂಬರ್ ಗೆ ಸ್ವತಃ ಕಾರ್ಪೊರೇಟರೇ ಇಳಿದು ಸಮಸ್ಯೆ ಬಗೆಹರಿಸಿದ ಘಟನೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ.
ಮಂಗಳೂರಿನ ಕದ್ರಿ ಕಂಬಳ ರಸ್ತೆ ಬದಿಯಲ್ಲಿ ನೀರು ಹರಿದು ಹೋಗುವ ಚರಂಡಿಯಲ್ಲಿ ಮಣ್ಣು, ಕಸಕಡ್ಡಿಗಳು ನಿಂತು ಮಳೆ ನೀರಿನ ಹರಿವಿಗೆ ಸಮಸ್ಯೆಯುಂಟಾಗಿತ್ತು. ಈ ಬಗ್ಗೆ ಸ್ಥಳೀಯರು ಮನಪಾ ಸದಸ್ಯ ಮನೋಹರ್ ಶೆಟ್ಟಿ ಕದ್ರಿಯವರ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ಬಂದ ಕಾರ್ಪೊರೇಟರ್ ಕಾರ್ಮಿಕರನ್ನು ಕರೆಸಿ, ಪಕ್ಕದಲ್ಲೇ ಇದ್ದ ಮ್ಯಾನ್ಹೋಲ್ ಚೇಂಬರ್ ನೊಳಗೆ ಇಳಿದು ಪರಿಶೀಲಿಸುವಂತೆ ಹೇಳಿದರು. ಆದರೆ ಈ ಮ್ಯಾನ್ಹೋಲ್ ನೊಳಗೆ ಇಳಿಯಲು ಕಾರ್ಮಿಕರು ನಿರಾಕರಿಸಿದಾಗ, ಸತಃ ಕಾರ್ಪೊರೇಟರ್ ಕದ್ರಿ ಮನೋಹರ್ ಶೆಟ್ಟಿ ಕೂಡಲೇ ತಮ್ಮ ಮನೆಯಿಂದ ಬದಲಿ ಉಡುಪುಗಳನ್ನು ತರಿಸಿ ಮ್ಯಾನ್ಹೋಲ್ ಚೇಂಬರ್ ಒಳಗಡೆ ಇಳಿದು ಸಮಸ್ಯೆ ಏನೆಂದು ಪರಿಶೀಲಿಸಿದರು.
ಅಲ್ಲಿ ಶೇಖರಣೆಗೊಂಡಿದ್ದ ಮಣ್ಣು ಹಾಗೂ ಕಸ, ಕಡ್ಡಿಗಳನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಟ್ಟರು. ಇವರ ಈ ಜನಪರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಇತರರಿಗೆ ಮಾದರಿಯಾಗಿದ್ದಾರೆ