ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮಹಾಸ್ಫೋಟವಾಗುತ್ತಿದ್ದಂತೆ ಭಯಭೀತರಾದ ಜನರು ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಮಾಡುತ್ತಿದ್ದಾರೆ.
ಬೆಂಗಳೂರಿನಿಂದ ಜನರು ತಮ್ಮ ಊರಿಗೆ ಹೊರಟಿರುವ ಹಿನ್ನೆಲೆಯಲ್ಲಿ ನವಯುಗ ಟೋಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ. ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನವಯುಗ ಟೋಲ್ನಲ್ಲಿ ಸಾಲಾಗಿ ವಾಹನಗಳು ನಿಂತಿವೆ. ಈ ಮೂಲಕ ಶನಿವಾರ ಬೆಂಗಳೂರು ನಗರದಲ್ಲಿ ಕೊರೊನಾ ಮಹಾ ಸ್ಫೋಟಕ್ಕೆ ಜನರು ಹೆದರಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನೂ ಕೆಲವರು ಬೆಂಗಳೂರಿಗಿಂತ ತಮ್ಮ ಊರುಗಳೇ ಸುರಕ್ಷಿತ ಎಂದು ಮನೆ ಖಾಲಿ ಮಾಡಿಕೊಂಡು ಲಗೇಜ್ ಸಮೇತ ಬೆಂಗಳೂರು ಬಿಟ್ಟು ಹೊರಟ್ಟಿದ್ದಾರೆ. ಮಕ್ಕಳಿಗೆ ಶಾಲೆ ಇಲ್ಲ, ನಮಗೂ ಮಾಡಲು ಕೆಲಸವಿಲ್ಲ. ಇದರಿಂದ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಮ್ಮ ಊರಿಗೆ ಹೋಗುತ್ತಿದ್ದೇವೆ ಎಂದು ಜನರು ಹೇಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಬರೋಬ್ಬರಿ 596 ಮಂದಿಗೆ ಕೊರೊನಾ ದೃಢವಾಗಿದೆ. ಹೀಗಾಗಿ ಕೊರೊನಾ ತಡೆಗಾಗಿ ಸರ್ಕಾರ ಪ್ರತಿ ಭಾನುವಾರ ಲಾಕ್ಡೌನ್ ಮಾಡಲು ನಿರ್ಧರಿಸಿದೆ. ಹಾಗೆಯೇ ನೈಟ್ ಕರ್ಫ್ಯೂ ಅವಧಿಯನ್ನು ವಿಸ್ತರಣೆ ಮಾಡಲಾಗುತ್ತಿದೆ. ರಾತ್ರಿ 8 ಗಂಟೆಯಿಂದಲೇ ಕರ್ಫ್ಯೂ ಜಾರಿಯಾಗಲಿದ್ದು, ಅನಾವಶ್ಯಕವಾಗಿ ಹೊರ ಬರೋರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
ಸೋಮವಾರದಿಂದ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ರಾತ್ರಿ 8 ರಿಂದ ಬೆಳಗ್ಗೆ 5 ಗಂಟೆಯವರೆಗೆ ಬಂದ್ ಆಗಲಿದೆ. ಶನಿವಾರ ಒಂದೇ ದಿನ ಕೊರೊನಾ ಮಹಾಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಮತ್ತೆ ಜಾರಿಯಾಗಿದೆ. ಇವತ್ತು ಒಂದೇ ದಿನ ಮಾತ್ರ ರಾತ್ರಿ 9 ಗಂಟೆ ತನಕ ವ್ಯವಹಾರ ನಡೆಸಬಹುದಾಗಿದ್ದು, ನಾಳೆಯಿಂದ ರಾತ್ರಿ 8 ಗಂಟೆಯಿಂದ 5 ರ ತನಕ ಕರ್ಫ್ಯೂ ಇರಲಿದೆ.