ಮಡಿಕೇರಿ: ಕಳೆದ ಎರಡು ವರ್ಷಗಳಿಂದಲೂ ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿರುವ ಕೊಡಗು ಜಿಲ್ಲೆಗೆ ಈ ಬಾರಿಯೂ ಗಂಡಾಂತರ ಕಾದಿದೆಯಾ ಎಂಬ ಆತಂಕ ಇದೀಗ ಸ್ಥಳೀಯರಲ್ಲಿ ಎದುರಾಗಿದ್ದು, ಎನ್ಡಿಆರ್ ಎಫ್ ಮತ್ತು ಎಸ್ಡಿಆರ್ ಎಫ್ ತಂಡಗಳು ತರಬೇತಿಗೆ ಆಗಮಿಸಿರುವುದೇ ಇದಕ್ಕೆ ಕಾರಣವಾಗಿದೆ.
ಚನ್ನೈನಿಂದ ಬಂದ ಎನ್ಡಿಆರ್ ಎಫ್ ಮತ್ತು ಬೆಂಗಳೂರಿನಿಂದ ಬಂದ ಎಸ್ಡಿಆರ್ ಎಫ್ ತಂಡಗಳು ಜಿಲ್ಲೆಯ ರಿಸರ್ವ್ ಪೊಲೀಸ್ ಮತ್ತು ಅಗ್ನಿಶಾಮಕ ದಳಗಳ ಜೊತೆಗೂಡಿ ಅಭ್ಯಾಸ ನಡೆಸುತ್ತಿವೆ. ಕಳೆದ ಬಾರಿ ಭೂಕುಸಿತವಾಗಿ ಐವರು ಭೂ ಸಮಾಧಿಯಾಗಿದ್ದ ತಲಕಾವೇರಿಯ ಗಜಗಿರಿ ಬೆಟ್ಟದಲ್ಲಿ ಪ್ರವಾಹ ಮತ್ತು ಭೂಕುಸಿತದ ಸಂದರ್ಭದಲ್ಲಿ ಜನರ ರಕ್ಷಣೆ ಮಾಡುವ ಬಗ್ಗೆ ತಂಡಗಳು ಅಭ್ಯಾಸ ಮಾಡುತ್ತಿವೆ.
- Advertisement 2
- Advertisement 3
ಇದೇ ಸ್ಥಳದಲ್ಲಿ ತರಬೇತಿ ಮಾಡುತ್ತಿರುವುದು ಯಾಕೆ ಎಂಬ ಅನುಮಾನಗಳನ್ನು ಎದ್ದಿದ್ದು, ಕಳೆದ ಬಾರಿ ಗಜಗಿರಿಬೆಟ್ಟದಲ್ಲಿ ಭೂಕುಸಿತವಾಗಿದ್ದಕ್ಕೆ ತಲಕಾವೇರಿ ಮತ್ತು ಗಜಗಿರಿಬೆಟ್ಟದಲ್ಲಿ ಅರಣ್ಯ ಇಲಾಖೆ ತೆಗೆದಿದ್ದ ಇಂಗು ಗುಂಡಿಗಳೇ ಮುಖ್ಯ ಕಾರಣ ಎಂಬುದು ಸಾಬೀತಾಗಿದೆ. ಜೊತೆಗೆ ಬ್ರಹ್ಮಗಿರಿ ಬೆಟ್ಟದಲ್ಲಿ ಇನ್ನೂ ನೂರಾರು ಇಂಗುಗುಂಡಿಗಳು ಇವೆ. ಹೀಗಾಗಿ ತಲಕಾವೇರಿಯಲ್ಲಿ ಈ ಬಾರಿಯೂ ಮತ್ತೆ ಭೂಕುಸಿತವಾಗುತ್ತಾ, ಆದ್ದರಿಂದಲೇ ಕಳೆದ ಬಾರಿ ಭೂಕುಸಿತವಾಗಿದ್ದ ಜಾಗದಲ್ಲೇ ಎನ್ಡಿಆರ್ಎಫ್ ತಂಡ ಅಭ್ಯಾಸ ಆರಂಭಿಸಿದೆಯೇ ಎಂಬ ಅನುಮಾನ ಕಾಡುತ್ತಿದೆ.
- Advertisement 4
ರಕ್ಷಣಾ ತಂಡಗಳು ಅಭ್ಯಾಸ ಮಾಡುತ್ತಿರುವ ಜೊತೆಗೆ ಬೆಟ್ಟಕುಸಿಯುವ ಮತ್ತು ಪ್ರವಾಹ ಎದುರಾಗುವ ಅಪಾಯಕಾರಿ ಸ್ಥಳಗಳಲ್ಲಿ ಇದ್ದರೆ ಮಳೆ ಆರಂಭವಾಗುತ್ತಿದ್ದಂತೆ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿ ಎಂದು ಅರಿವು ಮೂಡಿಸುವ ಕೆಲಸವನ್ನೂ ಮಾಡಿದ್ದಾರೆ. ರಕ್ಷಣಾ ತಂಡಗಳ ತರಬೇತಿ, ಜಿಲ್ಲಾಡಳಿತದ ಈ ಸಿದ್ಧತೆ ಜೊತೆಗೆ ಈ ಬಾರಿ ಜನವರಿ ತಿಂಗಳಿಂದಲೇ ಕೊಡಗಿನಲ್ಲಿ ಭಾರೀ ಮಳೆ ಸುರಿಯುತ್ತಿದೆ.
ಈ ಬಾರಿಯೂ ನಮಗೆ ಸಂಕಷ್ಟ ತಪ್ಪಿದ್ದಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮಳೆ ಆರಂಭವಾದಾಗ ಅಪಾಯಕಾರಿ ಸ್ಥಳಗಳಿಂದ ಜನರು ಸುರಕ್ಷಿತ ಸ್ಥಳಗಳಿಗೆ ಹೋಗಿ ಎಂದು ಜಿಲ್ಲಾಡಳಿತವೇನೋ ಹೇಳುತ್ತದೆ. ಆದರೆ 2018 ರಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಮನೆ ಕೊಟ್ಟಿಲ್ಲ. ಮೂರು ವರ್ಷಗಳಿಂದ ಸಾವಿರಾರು ಜನರು ನಿರ್ಗತಿಕರಾಗಿದ್ದಾರೆ. ಅವರೆಲ್ಲಾ ಎಲ್ಲಿ ಹೋಗಬೇಕು ಎನ್ನೋದು ಸ್ಥಳೀಯರ ಪ್ರಶ್ನೆಯಾಗಿದೆ.