ಮಡಿಕೇರಿ: ಕೊಡಗು ಜಿಲ್ಲೆಯ ಏಕೈಕ ಜಲಾಶಯ ಹಾರಂಗಿಯ ಒಡಲು ಭರ್ತಿಯಾಗಲು ಇನ್ನು ಕೆಲವೇ ಅಡ್ಡಿಗಳಷ್ಟು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ವರ ಮಹಾಲಕ್ಷ್ಮಿ ಹಬ್ಬದ ದಿನದಂದು ಜಲಾಶಯಕ್ಕೆ ಬಾಗಿನ ಅರ್ಪಿಸಿದ್ರು .
ಬಾಗಿನ ಅರ್ಪಣೆ ಬಳಿಕ ಮಾತಾನಾಡಿದ ಶಾಸಕ ಅಪ್ಪಚ್ಚು ರಂಜನ್, ಕೊಡಗು ಜಿಲ್ಲೆಯ ಜನತೆ ಕಳೆದ ಎರಡು ವರ್ಷಗಳಿಂದಲೂ ಪ್ರಾಕೃತಿಕ ವಿಕೋಪದದಿಂದ ತತ್ತರಿಸಿದ್ದಾರೆ. ಅತಿವೃಷ್ಠಿಯಿಂದ ಸಾಕಷ್ಟು ಮಂದಿ ಕಷ್ಟ ಅನುಭವಿಸಿದ್ದಾರೆ. ಈ ವರ್ಷ ಇಂತಹ ದುರ್ಘಟನೆಗಳು ಸಂಭವಿಸದಂತೆ ಜಿಲ್ಲೆಯ ಅಧಿದೇವತೆ ಕಾವೇರಿ ಮಾತೆಯನ್ನು ಪ್ರಾರ್ಥಿಸಿ ಬಾಗಿನ ಸಮರ್ಪಿಸಿದ್ದೇವೆ ಎಂದರು.
ಜಲಾಶಯದಲ್ಲಿ 7 ಟಿಎಂಸಿ ನೀರಿನ ಸಂಗ್ರಹವಿದ್ದು, 1.5 ಟಿಎಂಸಿ ಮಾತ್ರ ಭರ್ತಿಯಾಗಲು ಬಾಕಿ ಇದೆ. ಆದರೆ ರೈತರ ಅನುಕೂಲಕ್ಕೆ ಎಡ ಹಾಗೂ ಬಲದಂಡೆಗಳ ಮೂಲಕ 900 ಕ್ಯೂಸೆಕ್ಸ್ ನೀರನ್ನ ಹೊರ ಬಿಡಲಾಗುವುದು. ಇದನ್ನು ಅನ್ನದಾತರು ಹಾಗೂ ರಾಜ್ಯದ ಜನತೆ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಕಳೆದ 24 ವರ್ಷದಿಂದ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರಲಾಗಿದೆ. ಈ ಜಲಾಶಯದಿಂದ ಪಕ್ಕದ ಹಾಸನ ಮತ್ತು ಮೈಸೂರು ಜಿಲ್ಲೆಯ ರೈತರಿಗೆ ನೀರು ವರದಾನವಾಗಲಿದೆ. ಇದಕ್ಕೂ ಮೊದಲು ಜಲಾಶಯದ ಬಳಿ ಇರುವ ಕಾವೇರಿಗೆ ಪೂಜೆ ನೆರವೇರಿಸಲಾಯಿತು.