ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದ್ದು, ಗುಂಡು ಹಾರಿಸಿ ರೌಡಿ ಶೀಟರ್ ನನ್ನು ಸಂಜಯ್ ನಗರ ಪೊಲೀಸರು ಬಂಧಿಸಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರೌಡಿ ಶೀಟರ್ ಅವಿನಾಶ್ ಸಂಜಯ್ ನಗರ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಅರೋಪಿ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ. ರಸ್ತೆಯಲ್ಲಿ ಓರ್ವನಿಗೆ ಅವಿನಾಶ್ ಅಂಡ್ ಗ್ಯಾಂಗ್ ಹಲ್ಲೆ ಮಾಡಿತ್ತು. ಹಲ್ಲೆ ಮಾಡಿದ್ದ ಸಂಭಂದ ಕೊಲೆಯತ್ನ ಕೇಸ್ ದಾಖಲಾಗಿತ್ತು. ಕೊಲೆಯತ್ನ ಕೇಸ್ ನಲ್ಲಿ ಆರೋಪಿ ಅವಿನಾಶ್ನನ್ನು ವಶಕ್ಕೆ ಪಡೆಯಲು ಪೊಲೀಸರು ತೆರಳಿದ್ದರು. ಈ ವೇಳೆ ಸಂಜಯ್ ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಸಂತೋಷ್ ಅವರ ಮೇಲೆ ರೌಡಿ ಶೀಟರ್ ದಾಳಿ ನಡೆಸಿದ್ದ. ಇದನ್ನೂ ಓದಿ: 10 ವರ್ಷಗಳ ಬಳಿಕ ಹುಟ್ಟೂರಿಗೆ ಬಂದಿದ್ದೇನೆ: ಜನಾರ್ದನ ರೆಡ್ಡಿ
ಏನಿದು ಘಟನೆ?
ಆಗಸ್ಟ್ 2ರಂದು ಹಾಡಹಗಲೇ ನಡುರಸ್ತೆಯಲ್ಲಿ ರಾಮಮೂರ್ತಿನಗರ ನಿವಾಸಿ 55 ವರ್ಷದ ಮುನಿರಾಜು ಎಂಬ ವ್ಯಕ್ತಿಯ ಮೇಲೆ ಅವಿನಾಶ್ ಅಟ್ಯಾಕ್ ಮಾಡಿದ್ದ. ಕಿಡಿಗೇಡಿಗಳು ಬೈಕ್ ಬೀಳಿಸಿ, ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳನ್ನು ಬೀಸಿದ್ದರು. ಸ್ಥಳದಲ್ಲಿ ಮಹಿಳೆಯರೂ ಇದ್ದರು. ಇದೇ ವೇಳೆ ಅವಿನಾಶ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ. ಕಬ್ಬಿಣದ ಸಲಾಕೆ ಮತ್ತು ವಿಕೆಟ್ ನಿಂದ ವ್ಯಕ್ತಿ ಮೇಲೆ ಹಲ್ಲೆ ಮಾಡಲಾಗಿತ್ತು. ಹಲ್ಲೆ ವೇಳೆ ಮಹಿಳೆ ಕಿರುಚಾಡುತ್ತಿದ್ದರು. ಆದರೂ ಬಿಡದೇ ದಾಳಿ ನಡೆಸಿದ್ದ ಘಟನೆ ಸಂಜಯನಗರದಲ್ಲಿ ನಡೆದಿತ್ತು.
ಪುಂಡರ ಹಲ್ಲೆ ವೀಡಿಯೋ ಸಾರ್ವಜನಿಕರ ಮೊಬೈಲ್ ನಲ್ಲಿ ಸೆರೆಯಾಗಿತ್ತು. ಸಾರ್ವಜನಿಕರ ಎದುರೆ ಕಬ್ಬಿಣದ ಸಲಾಕೆ ಬೀಸಿ ಹಲ್ಲೆ ಮಾಡಲಾಗಿತ್ತು. ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ತಲೆಗೆ ಹೆಲ್ಮೆಟ್ ಧರಿಸಿ ಬಂದ ಮೂವರಿಂದ ಹಲ್ಲೆ ಮಾಡಲಾಗಿತ್ತು. ರಸ್ತೆಯಲ್ಲಿ ಬೈಕ್ ಅಡ್ಡಗಟ್ಟಿ ಚಾಕುವಿನಿಂದ ಇರಿಯಲಾಗಿತ್ತು. ಬಳಿಕ ವಿಕೆಟ್ ಹಾಗೂ ಸಲಾಕೆಯಿಂದ ಹಲ್ಲೆ ನಡೆಸಿ, ಸಾಯಿಸಿ ಬೀಡುತ್ತೇವೆ ಎಂದು ಬೆದರಿಕೆ ಹಾಕಿ ಎಸ್ಕೆಪ್ ಆಗಿದ್ದರು.
ಹಲ್ಲೆ ಬಳಿಕ ಕೃತ್ಯಕ್ಕೆ ಬಳಸಿದ್ದ ಸಲಾಕೆಯನ್ನು ಬಿಲ್ಡಿಂಗ್ ಕಡೆ ಎಸೆದು ಪರಾರಿಯಾಗಿದ್ದರು. ಈ ಕುರಿತು ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಅವಿನಾಶ್ ನನ್ನ ಬಂಧಿಸಲು ಹೋದಾಗ ಸಂಜಯ್ ನಗರ ಸಿಬ್ಬಂದಿ ಸಂತೋಷ್ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಈ ವೇಳೆ ಆರೋಪಿಗೆ ಗುಂಡೇಟು ಬಿದ್ದಿದೆ.