ಬೆಂಗಳೂರು: ಯಾವ ಲವ್ ಸ್ಟೋರಿಗಿಂತ ಈ ಸ್ಟೋರಿ ಕಡಿಮೆಯೇನಿಲ್ಲ. ಪ್ರಿಯಕರಿನಿಗಾಗಿ ಏನು ಬೇಕಾದ್ರು ಮಾಡಲು ಸಿದ್ಧಳಿದ್ದಳು ಆಕೆ. ಪ್ರಿಯಕರನ ಮಾತು ಕೇಳಿ ದಾರಿ ತಪ್ಪಿದ ಯುವತಿ ಇದೀಗ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದು ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾಳೆ.
ಪ್ರೀತಿಗಾಗಿ ಪೋಷಕರನ್ನ ದೂರಮಾಡಿ ಪ್ರಿಯತಮನಿಗಾಗಿ ಯುವತಿ ಗಾಂಜಾ ಮಾರಾಟಕ್ಕಿಳಿದ್ದಳು. ಆಂಧ್ರಪ್ರದೇಶ ಶ್ರೀಕಾಕುಳಂನ ರೇಣುಕಾ(25) ಚೆನೈನಲ್ಲಿ ಎಂಜಿನಿಯರಿಂಗ್ ಮಾಡುವಾಗ ಕಡಪದ ಸಿದ್ದಾರ್ಥ್ ಜೊತೆಗೆ ಲವ್ ಆಗಿತ್ತು. ಕಾಲೇಜು ಕ್ಯಾಂಪಸ್ ನಲ್ಲಿ ಅರಳಿದ ಪ್ರೀತಿಗೆ ಯುವತಿ ತುಂಬಾನೆ ಬೆಲೆ ಕೊಡುತ್ತಿದ್ದಳು. ವಿದ್ಯಾಭ್ಯಾಸ ಮುಗಿದ ಬಳಿಕ ಸಿದ್ಧಾರ್ಥ್ ತವರು ರಾಜ್ಯಕ್ಕೆ ಹೋಗಿದ್ದ. ಯುವತಿ ರೇಣುಕಾ ಚನ್ನೈನಲ್ಲೇ ಸಾಫ್ಟ್ ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಳು.
ಐಷಾರಾಮಿ ಜೀವನಕ್ಕಾಗಿ ಗಾಂಜಾ ಸಪ್ಲೈ ಮಾಡ್ತಿದ್ದ ಪ್ರಿಯಕರ ಸಿದ್ದಾರ್ಥ್, ಹಣದಾಸೆಗೆ ಪ್ರಿಯತಮೆಯನ್ನೂ ಗಾಂಜಾ ಮಾರಾಟಕ್ಕೆ ಇಳಿಸಿದ್ದ. ಹೊಸ ಬ್ಯುಸಿನೆಸ್ ನಲ್ಲಿ ಹೆಚ್ಚಹ ಹಣ ಸಿಕ್ತಿದೆ ಬಾ ಅಂತಾ ಕೆಲಸ ಬಿಡಿಸಿ, ತನ್ನೊಟ್ಟಿಗೆ ಇಟ್ಕೊಂಡಿದ್ದ. ಮನೆಯಲ್ಲಿ ಪೋಷಕರ ವಿರೋಧದ ನಡುವೆಯೂ ಲವರ್ ಸಿದ್ದಾರ್ಥ್ ಜೊತೆ ಯುವತಿ ವಿಶಾಖ ಪಟ್ನಂ ನಲ್ಲಿದ್ದಳು.
ಬಿಹಾರದ ಓರ್ವನನ್ನ ಪರಿಚಯಿಸಿ ಬೆಂಗಳೂರು ನಗರದಲ್ಲಿ ಗಾಂಜಾ ಮಾರಾಟಕ್ಕೆ ಆಕೆಯನ್ನ ಕಳಿಸಿದ್ದ. ಲಾಕ್ ಡೌನ್ ಬಂಡವಾಳ ಮಾಡಿಕೊಂಡು ಹೆಚ್ಚು ಹಣಕ್ಕೆ ಮಾರಾಟ ಕೂಡ ಮಾಡುತ್ತಿದ್ದರು. ಬಿಹಾರದ ವ್ಯಕ್ತಿ ಜೊತೆ ಸೇರಿ ಗಾಂಜಾವನ್ನ ಸಣ್ಣ ಪೊಟ್ಟಣಗಳನ್ನಾಗಿ ಮಾಡುತ್ತಿದ್ದರು. ಇದೀಗ ಪೊಲೀಸರು ಕಾರ್ಯಾಚರಣೆ ನಡೆಸಿ ರೇಣುಕಾಳ ಜೊತೆ ಬಿಹಾರದ ಗಾಂಜಾ ಕಿಂಗ್ ಪಿನ್ ನನ್ನ ಸಹ ಸದಾಶಿವನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇತ್ತ ಪ್ರಿಯತಮೆಯ ಬಂಧನದ ಸುದ್ದಿ ಕೇಳಿ ಪ್ರಿಯಕರ ಸಿದ್ದಾರ್ಥ್ ತಲೆ ಮರೆಸಿಕೊಂಡಿದ್ದಾನೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಿಯಕರನ ಮೋಹಕ್ಕೆ ಸಿಲುಕಿ ಇಂತಹ ಕೃತ್ಯ ಎಸಗಿದ್ದಾಗಿ ಕಣ್ಣೀರು ಹಾಕುತ್ತಿದ್ದಾಳೆ.