ಹಾವೇರಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಕಲಿಗೆ ಸಹಕರಿಸುತ್ತಿದ್ದ ಖಾಸಗಿ ಶಾಲೆಯ ನಾಲ್ವರು ಶಿಕ್ಷಕರು ಹಾಗೂ ಕೊಠಡಿಯ ಮೇಲ್ವಿಚಾರಕನನ್ನು ವಶಕ್ಕೆ ಪಡೆದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ನಡೆದಿದೆ.
ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೇಳಿಕೊಡಲು ಬಂದ ಶಿಕ್ಷಕರನ್ನು ಜಗದೀಶ್ ಶಿವಪ್ಪನವರ, ಮನೋಹರ ಬಿ.ಆರ್, ಗುತ್ತೆಪ್ಪ ಬಾಳಂಬೀಡ, ಶಿವಯೋಗಿ ರಾಗಿ ಎಂದು ಗುರುತಿಸಲಾಗಿದೆ. ಹಿರೇಕೆರೂರು ತಹಶೀಲ್ದಾರ ಆರ್.ಎಚ್.ಭಾಗವಾನ ಭೇಟಿ ನೀಡಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ತಹಶೀಲ್ದಾರ್ ಹಾಗೂ ಪೊಲೀಸರನ್ನು ಕಂಡು ಶಿಕ್ಷಕರು ಓಡಿ ಹೋಗುತ್ತಿದ್ದರು. ಇದನ್ನು ಗಮನಿಸಿದ ತಹಶೀಲ್ದಾರ್ ಭಾಗವಾನ ನಾಲ್ವರು ಶಿಕ್ಷಕರನ್ನು ಹಾಗೂ ಕೊಠಡಿಯ ಮೇಲ್ವಿಚಾರಕ ನಾಗರಾಜ್ ವಿರುದ್ಧ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ನಂತರ ಪೊಲೀಸರು ಶಿಕ್ಷಕರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.