– ಜೈಲಿನಲ್ಲೇ ರೆಡಿ ಆಯ್ತು ಸ್ಕೆಚ್, 9 ಮಂದಿಯ ಬಂಧನ
ಬೆಂಗಳೂರು: ತನ್ನ ಪತಿಯನ್ನು ಕೊಂದವರನ್ನು ಕೊಲೆ ಮಾಡಿಸಲು ಮಹಿಳೆಯೋರ್ವಳು ಒಂದು ಕೋಟಿಗೆ ಸುಪಾರಿ ಕೊಟ್ಟು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಹೌದು 2018ರಲ್ಲಿ ಕೊಲೆಯಾದ ತನ್ನ ಪತಿ ಗೋವಿಂದೇಗೌಡನ ಸಾವಿಗೆ ಪ್ರತಿಕಾರ ತೀರಿಸಕೊಳ್ಳಲು ಪತ್ನಿ ವರಲಕ್ಷ್ಮಿ ಸುಪಾರಿ ನೀಡಿದ್ದಾಳೆ. ಈ ಸಂಬಂಧ ಈಗ ರಾಜಗೋಪಾಲ ನಗರ ರೌಡಿಶೀಟರ್ ರಾಜ ಅಲಿಯಾಸ್ ಕ್ಯಾಟ್ ರಾಜನ 9 ಜನ ಸಹಚರರ ಬಂಧನವಾಗಿದೆ.
2018ರಲ್ಲಿ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಗೋವಿಂದೇಗೌಡ ಕೊಲೆಯಾಗಿದ್ದ. ಈ ಕೊಲೆ ಸಂಬಂಧ 2016ರಲ್ಲಿ ಸಂಚು ರೂಪಿಸಿ ಚಿಕ್ಕತಿಮ್ಮೇಗೌಡ ಎಂಬುವರನ್ನು ವರಲಕ್ಷ್ಮಿ ಕೊಲೆ ಮಾಡಿಸಿದ್ದಳು. ಈ ಕೊಲೆ ತನಿಖೆ ಮಾಡುವಂತೆ ಚಿಕ್ಕತಿಮ್ಮೇಗೌಡನ ಸಹೋದರ ನಟರಾಜ್ ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ದೂರುದಾರ ನಟರಾಜ್ ಮತ್ತು ಆತನ ಜೊತೆಯಲ್ಲಿದ್ದ ಹೇಮಂತ್ನನ್ನು ಕೊಲೆ ಮಾಡಿಸಲು ವರಲಕ್ಷ್ಮಿ ಸುಪಾರಿ ನೀಡಿದ್ದಾಳೆ.
ವರಲಕ್ಷ್ಮಿ ರಾಜಗೋಪಾಲ ನಗರ ರೌಡಿಶೀಟರ್ ರಾಜ ಅಲಿಯಾಸ್ ಕ್ಯಾಟ್ ರಾಜ ಮತ್ತು ಹೇಮಿ ಅಲಿಯಾಸ್ ಹೇಮಂತ್ಗೆ ಸುಪಾರಿ ನೀಡಿದ್ದಾಳೆ. ಜೈಲಿನಲ್ಲಿ ಇದ್ದುಕೊಂಡೆ ಒಂದು ಕೋಟಿಗೆ ಡೀಲ್ ಕುದಿರಿಸಿದ್ದ ಕ್ಯಾಟ್ ರಾಜ, ತನ್ನ ಜೊತೆ ಜೈಲಿನಲ್ಲಿದ್ದ ಹೇಮಂತ್ ಸೋದರ ಚೇತು ಮತ್ತು ಸಹಚರರಿಂದ ಕೊಲೆ ಮಾಡಿಸಲು ಸ್ಕೆಚ್ ರೂಪಿಸಿದ್ದ. ಆದರೆ ಈಗ ತನಿಖೆ ವೇಳೆ ಈ ವಿಷಯ ಬೆಳಕಿಗೆ ಬಂದಿದ್ದು, ಪೊಲೀಸರು ಕೊಲೆಗೆ ಸ್ಕೆಚ್ ಹಾಕಿದ್ದ 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.