– ಅನುಮಾನ ಹುಟ್ಟಿಸಿದ ಪಿಡಬ್ಲ್ಯುಡಿ ಇಲಾಖೆಯ ನಿರ್ಧಾರ
ಬೆಂಗಳೂರು: ರಾಜ್ಯದ ಶಕ್ತಿಸೌಧ ವಿಧಾನಸೌಧವನ್ನು ಸ್ವಚ್ಛ ಮಾಡಲು ಪಿಡಬ್ಲ್ಯುಡಿ ಇಲಾಖೆ 59 ಲಕ್ಷ ವೆಚ್ಚದಲ್ಲಿ ಟೆಂಡರ್ ಕರೆದು ದುಂದು ವೆಚ್ಚಕ್ಕೆ ಮುಂದಾಗಿದೆ.
ವಿಧಾನಸೌಧವನ್ನು ಸ್ವಚ್ಛವಾಗಿ ಇಡಲು ಸ್ವಚ್ಛತಾ ಸಿಬ್ಬಂದಿ, ಪ್ರತಿ ವಿಭಾಗದಲ್ಲಿ ಡಿ ಗ್ರೂಪ್ ನೌಕರರು ಇದ್ದಾರೆ. ಈಗಾಗಲೇ ಪ್ರತಿದಿನ ವಿಧಾನಸೌಧದ ಪ್ರತಿ ಕಚೇರಿ ಹಾಗೂ ಕಾರಿಡಾರ್ ಗಳನ್ನು ಸ್ವಚ್ಛಗೊಳಿಸಲಾಗುತ್ತೆ. ಇವೆಲ್ಲ ಇದ್ದರೂ ವಿಧಾನಸೌಧ ಕ್ಲೀನ್ ಮಾಡಲು ಹೊಸ ಟೆಂಡರ್ ಕರೆಯಲಾಗಿದೆ.
ವಿಧಾನಸೌಧದಲ್ಲಿರುವ ಕಚೇರಿಗಳನ್ನು ಆಯಾ ಇಲಾಖೆಯಲ್ಲಿನ ಡಿ ಗ್ರೂಪ್ ನೌಕರರು ಸ್ವಚ್ಛಗೊಳಿಸುತ್ತಾರೆ. ವಿಧಾನ ಸೌಧದ ಕಾರಿಡಾರ್ ಹಾಗೂ ಹೊರ ಭಾಗದ ಸ್ವಚ್ಛತೆಗೆ ಗುತ್ತಿಗೆ ಆಧಾರಿತ ಕಾರ್ಮಿಕರು ಪ್ರತ್ಯೇಕವಾಗಿದ್ದಾರೆ. ಇಷ್ಟಾಗಿಯೂ ವಿಧಾನಸೌಧದ ಕಾರಿಡಾರ್ ಗಳನ್ನು ನೀರು ಹಾಕಿ ತೊಳೆಯಲು ಪ್ರತ್ಯೇಕ ಟೆಂಡರ್ ಕರೆದಿದ್ದು ಪಿಡಬ್ಲ್ಯುಡಿ ಇಲಾಖೆಯ ಈ ನಿರ್ಧಾರ ಅನುಮಾನ ಕಾರಣವಾಗಿದೆ.
ಕೊರೊನಾ ಸಮಯದಲ್ಲಿ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಿರುವಾಗ ವಿಧಾನಸೌಧದ ಪಿಡಬ್ಲ್ಯುಡಿ ಅಧಿಕಾರಿಗಳು ʼವಾಟರ್ ವಾಶ್ ಹೆಸರಲ್ಲಿ ಟೆಂಡರ್ ಕಾಸು ಮಾಡಲು ಹೊರಟ್ಟಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.