ಬೆಂಗಳೂರು: ಕೊರೊನಾದಿಂದ ಕಿರುತೆರೆ ಮತ್ತು ಸಿನಿಮಾರಂಗಕ್ಕೆ ಆಗಿರುವ ಸಮಸ್ಯೆಗಳ ಬಗ್ಗೆ ಇಂದು ಕನ್ನಡ ಸ್ಟಾರ್ ನಟರು, ನಟ ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ ಸಭೆ ನಡೆಸಿ ಚರ್ಚೆ ನಡೆಸಿದರು.
ಚಿತ್ರಮಂದಿರ ತೆರೆಯುವುದು ಹಾಗೂ ತೆರಿಗೆ ವಿನಾಯಿತಿಗೆ ಮನವಿ ಪಡೆಯುವ ಬಗ್ಗೆ ಸಚಿವ ಸಿಟಿ ರವಿ ಅವರೊಂದಿಗೆ ಕಲಾವಿದರು ಹಾಗೂ ನಿರ್ಮಾಪಕರು ಸಭೆಯಲ್ಲಿ ಮನವಿ ಮಾಡಿದರು. ಈ ವೇಳೆ ನಟರಾದ ರವಿಚಂದ್ರನ್, ಪುನೀತ್ ರಾಜ್ಕುಮಾರ್, ಉಪೇಂದ್ರ, ದುನಿಯಾ ವಿಜಯ್, ರಕ್ಷಿತ್ ಶೆಟ್ಟಿ, ಯಶ್, ರಮೇಶ್ ಅರವಿಂದ್, ಶ್ರೀಮುರಳಿ, ಗಣೇಶ್ ಹಾಗೂ ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಕಾರ್ತಿಕ್ ಗೌಡ, ಸೂರಪ್ಪ ಬಾಬು ಸೇರಿದಂತೆ ಹಲವರು ಸಭೆಯಲ್ಲಿ ಹಾಜರಿದ್ದರು.
ಸಭೆ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಸಿಟಿ ರವಿ ಅವರು, ಚಲನಚಿತ್ರೋದ್ಯಮ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿ ಚರ್ಚೆ ನಡೆಸಿದ್ದು, ಅನೇಕ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಉದ್ಯಮವನ್ನು ಅವಲಂಬಿಸಿರುವವರಿಗೆ ವಿಶೇಷ ಪ್ಯಾಕೇಜ್ ಹಾಗೂ ಚಿತ್ರೋದ್ಯಮ ಪುನಶ್ಚೇತನಕ್ಕೆ ಸಹಕಾರ ನೀಡಲು ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಅವರೊಂದಿಗೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಜಿಮ್ ಮತ್ತು ಚಿತ್ರಮಂದಿರ ಪುನರಾರಂಭ ಮಾಡುವ ನೀತಿ ನಿಯಮಗಳು ಕೇಂದ್ರ ಸರ್ಕಾರದ ನೀತಿ ನಿಯಮಗಳ ಮೇಲೆ ಅವಲಂಬನೆ ಆಗಿರುತ್ತೆ. ಕೇಂದ್ರದ ನಿರ್ಧಾರದ ಮೇಲೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಚಿತ್ರಮಂದಿರದವರು ಭೇಟಿ ಮಾಡಿ ಮಾತನಾಡಿದ್ದಾರೆ. ಅಲ್ಲದೇ ಕುರಿತಂತೆ ಸಿಎಂ ಅವರನ್ನು ಭೇಟಿ ಮಾಡಿಸಿ ಚರ್ಚೆ ಮಾಡುತ್ತೇವೆ. ಚಿತ್ರೋದ್ಯಮದ ಬಗ್ಗೆ ನಮಗೂ ಕಾಳಜಿ ಇದೆ ಎಂದು ಹೇಳಿದರು.