ಬೆಂಗಳೂರು: ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ತನ್ನ ಕ್ಷೇತ್ರದ ಜನರ ಬಳಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ.
ಇಂದು ಪುಂಡರ ಕೃತ್ಯಕ್ಕೆ ಬಲಿಯಾಗಿರುವ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಯನ್ನು ಮಹಜರ್ ಮಾಡಲು ಪೊಲೀಸರು ಆಗಮಿಸಿದ್ದರು. ಜೊತೆಗೆ ಸುಟ್ಟ ವಾಹನಗಳು ಹಾನಿಯಾಗಿರುವ ಸಾರ್ವಜನಿಕ ಆಸ್ತಿಪಾಸ್ತಿಗಳ ವೀಕ್ಷಣೆ ಮಾಡಿದರು. ಈ ವೇಳೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಅಖಂಡ ಶ್ರೀನಿವಾಸ್ ಅವರು ಮನೆ ನೋಡಲು ಬಂದಿದ್ದರು. ಈ ವೇಳೆ ಹಲವಾರು ಬೆಂಬಲಿಗರು, ಸ್ಥಳೀಯ ನಿವಾಸಿಗಳು ಅವರ ಮನೆಯ ಹತ್ತಿರ ಸೇರಿದ್ದರು.
- Advertisement 2
- Advertisement 3
ಮನೆ ಹತ್ತಿರ ಬಂದ ಶಾಸಕರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಗಲಭೆಯಲ್ಲಿ ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ನಷ್ಟವಾಗಿದೆ? ಈ ನಷ್ಟವನ್ನು ತುಂಬುವುದು ಹೇಗೆ ಎಂದು ಶಾಸಕರಿಗೆ ಪ್ರಶ್ನೆ ಕೇಳಿದರು. ಸ್ಥಳೀಯರ ಪ್ರಶ್ನೆಗಳಿಗೆ ಉತ್ತರಿಸಲು ಆಗದ ಶಾಸಕರು ಮೌನಕ್ಕೆ ಶರಣಾದರು. ಜೊತೆಗೆ ಹೆಣಗಳ ಮೇಲೆ ರಾಜಕೀಯ ಮಾಡುವುದನ್ನು ಬಿಡಿ. ಗಾಂಜಾ ಹೊಡೆದು ದುಷ್ಕೃತ್ಯ ಎಸಗಿದ್ದಾರೆ. ಬೈಕ್ ನಲ್ಲಿ ಕೂತು ಹಣ ಹಂಚಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಸ್ತಳೀಯರು ಆಕ್ರೋಶ ವ್ಯಕ್ತಪಡಿಸಿದರು.
- Advertisement 4
ಸ್ಥಳೀಯರ ಮಾತುಗಳನ್ನು ಕೇಳಿಸಿಕೊಂಡು ಮೌನವಾಗಿದ್ದ ಶ್ರೀನಿವಾಸ್ ಅವರು, ನಂತರ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ಎಂದು ಬಹಿರಂಗವಾಗಿ ಜನರಲ್ಲಿ ಕ್ಷಮೆಯಾಚಿಸಿದರು. ಆಗ ಸ್ಥಳೀಯರು ಕ್ಷಮೆ ಕೇಳುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನೀವೇ ನಿಂತು ಸಮಸ್ಯೆಯನ್ನು ಬಗೆಹರಿಸಿ ಎಂದು ಹೇಳಿದರು. ಇದೇ ವೇಳೆ ಶಾಸಕರ ಮನೆ ಸುತ್ತಮುತ್ತ ಜನರು ಜಾಮಾಹಿಸಿದ್ದರು. ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಜಾರ್ಚ್ ಮಾಡಿದರು.