– ಇಂದು ಮತ್ತೋರ್ವ ಸೋಂಕಿತ ಸಾವು
ಚಿತ್ರದುರ್ಗ: ಜಿಲ್ಲೆಯಲ್ಲಿ ಈವರೆಗೆ ಕೇವಲ ನಗರ ಪ್ರದೇಶದಲ್ಲಿರುವವರಿಗೆ ಮಾತ್ರ ಕೊರೊನಾ ಸೋಂಕು ಪತ್ತೆಯಾಗುತ್ತಿತ್ತು. ಆದರೆ ಇದೀಗ ಗ್ರಾಮಾಂತರ ಪ್ರದೇಶಕ್ಕೂ ಲಗ್ಗೆ ಇಟ್ಟಿದ್ದು, ಇಂದು ಒಂದೇ ದಿನ 77 ಪಾಸಿಟಿವ್ ಕೇಸ್ ಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 427ಕ್ಕೆ ಏರಿಕೆಯಾಗಿದೆ.
ಕೊರೊನಾ ಸೋಂಕು ಹರಡುತ್ತಿರುವುದರ ಜೊತೆಗೆ ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಇಂದು ಸಹ ಜಿಲ್ಲೆಯಲ್ಲಿ ಕೊರೊನಾಗೆ ಹಿರಿಯೂರು ಮೂಲದ 56 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ನಗರದ ಕೋವಿಡ್-19 ಆಸ್ಪತ್ರೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಇಂದು ಪತ್ತೆಯಾಗಿರುವ 77 ಜನರಲ್ಲಿ ಚಿತ್ರದುರ್ಗ ತಾಲೂಕು 24, ಚಳ್ಳಕೆರೆ 10, ಹೊಸದುರ್ಗ 10, ಹಿರಿಯೂರು 17, ಹೊಳಲ್ಕೆರೆ 08, ಮೊಳಕಾಲ್ಮೂರು 08 ಪ್ರಕರಣಗಳು ವರದಿಯಾಗಿದೆ. ಇತ್ತ ಕೊರೊನಾ ರೋಗಿಗಳನ್ನು ಶಿಫ್ಟ್ ಮಾಡುವ ವಿಚಾರದಲ್ಲಿ ಆರೋಗ್ಯ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದು, ಸೋಂಕಿತರನ್ನು ಶಿಫ್ಟ್ ಮಾಡುವಲ್ಲಿ ವಿಳಂಬ ಮಾಡುತ್ತಿರುವ ಹಿನ್ನಲೆಯಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಿವೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.