ಶ್ರೀನಗರ: ಜಮ್ಮು ಕಾಶ್ಮೀರದ ಸೋಪೊರ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಭದ್ರತಾ ಸಿಬ್ಬಂದಿ ಒರ್ವ ಉಗ್ರನನ್ನು ಹೊಡೆದುರುಳಿಸಿದ್ದಾರೆ. ಸದ್ಯ ಕಾರ್ಯಾಚರಣೆ ನಡೆಯುತ್ತಿದ್ದು, ಇನ್ನೂ ಕೆಲ ಉಗ್ರರು ಅಡಗಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಭಾರತೀಯ ಸೇನೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಹತನಾದ ಉಗ್ರ ಯಾವ ಸಂಘಟನೆಗೆ ಸೇರಿದವನು ಎಂದು ಅಧಿಕಾರಿಗಳು ಗುರುತಿಸುತ್ತಿದ್ದಾರೆ. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ.
ಇಂದು ಬೆಳಗ್ಗೆ ಸೋಪೊರದ ರೆಬ್ಬಾನ್ ಪ್ರದೇಶದಲ್ಲಿ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಉಗ್ರರು ಗುಂಡಿನ ಮಳೆಗೈದಿದ್ದಾರೆ. ಈ ವೇಳೆ ಉಗ್ರರು ಅಡಿ ಕುಳಿತ ಜಾಗದ ಕಡೆ ಪೊಲೀಸರು ಸಹ ಗುಂಡಿನ ದಾಳಿ ನಡೆಸಿದ್ದಾರೆ. ಆಗ ಒಬ್ಬ ಉಗ್ರ ಹತನಾಗಿದ್ದಾನೆ.
ಈ ಕುರಿತು ಭಾರತೀಯ ಸೇನೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಇಂದು ಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ನಡೆದ ಜಂಟಿ ಕಾರ್ಯಾಚರಣೆ ನಡೆದಿದ್ದು, ಕಾರ್ಡನ್ ಹಾಕಿ ಸಂಪರ್ಕ ಸಾಧಿಸಲಾಯಿತು, ಬಳಿಕ ಗುಂಡಿನ ಚಕಮಕಿ ನಡೆದಿದೆ. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ತಿಳಿಸಿದೆ.
ರೆಬ್ಬನ್ ಪ್ರದೇಶದಲ್ಲಿ ಮೂವರು ಉಗ್ರರು ತಲೆಮರೆಸಿಕೊಂಡಿದ್ದು, ಸಂಪೂರ್ಣ ಶಸ್ತ್ರಸಜ್ಜಿತರಾಗಿದ್ದಾರೆ ಎಂದು ಶನಿವಾರ ವರದಿಯಾಗಿತ್ತು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಪ್ರದೇಶದಲ್ಲಿ ಅಂತರ್ಜಾಲ ಸಂಪರ್ಕವನ್ನು ಸಹ ಕಡಿತ ಮಾಡಲಾಗಿತ್ತು. ಗಡಿಯ ಇನ್ನೊಂದು ಕಡೆಯಿಂದ ಭಾರತದೊಳಗೆ ನುಸುಳಲು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸುಮಾರು 250ರಿಂದ 300 ಉಗ್ರರು ಯತ್ನಿಸುತ್ತಿದ್ದಾರೆ ಎಂದು ನಿನ್ನೆಯಷ್ಟೇ ಸುದ್ದಿಗೋಷ್ಠಿಯಲ್ಲಿ ಮೇಜರ್ ಜನರಲ್ ವೀರೇಂದ್ರ ವಾಟ್ಸ್ ಹೇಳಿದ್ದರು.