ನವದೆಹಲಿ: ಕೋವಿಡ್ 19 ಲಾಕ್ಡೌನ್ ಸಮಯದಲ್ಲಿ ಪಾದೂರು, ಮಂಗಳೂರಿನಿಂದಾಗಿ ದೇಶಕ್ಕೆ ಸಾವಿರಾರು ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಿದೆ.
ಹೌದು. ಮಂಗಳೂರು, ಉಡುಪಿಯ ಪಾದೂರು, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಒಟ್ಟು 5.33 ದಶಲಕ್ಷ ಟನ್ ತೈಲವನ್ನು ಸಂಗ್ರಹ ಮಾಡುವ ಮೂಲಕ ದೇಶಕ್ಕೆ 5 ಸಾವಿರ ಕೋಟಿ ರೂ. ಉಳಿತಾಯಗೊಂಡಿದೆ.
ಕೋವಿಡ್ 19ನಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಇಳಿಕೆ ಕಂಡಿತ್ತು. ಈ ಸಂದರ್ಭದಲ್ಲಿ ಭಾರತ ಕಡಿಮೆ ದರದಲ್ಲಿ ತೈಲವನ್ನು ಖರೀದಿಸಿ ಈ ಸಂಗ್ರಹಾಗಾರದಲ್ಲಿ ಸಂಗ್ರಹಿಸಿ ಭರ್ತಿ ಮಾಡಿದೆ. ಇದರಿಂದಾಗಿ ಒಟ್ಟು 5 ಸಾವಿರ ರೂ. ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.
ಕೋವಿಡ್19 ಬರುವುದಕ್ಕೆ ಮೊದಲು ಮಂಗಳೂರು, ಪಾದೂರು ಅರ್ಧ ತುಂಬಿದ್ದರೆ, ವಿಶಾಖಪಟ್ಟಣದಲ್ಲಿ ಸ್ವಲ್ಪ ಜಾಗ ಉಳಿದಿತ್ತು. ಈಗ ಸರ್ಕಾರ ಸೌದಿ ಅರೇಬಿಯಾ, ಯುಎಇ ಮತ್ತು ಇರಾಕ್ ನಿಂದ ತೈಲವನ್ನು ಖರೀದಿಸಿ ಭರ್ತಿ ಮಾಡಿದೆ. 5.33 ದಶಲಕ್ಷ ಟನ್ ಕಚ್ಚಾ ತೈಲ ಸಂಗ್ರಹದಿಂದ ದೇಶದಲ್ಲಿನ 9 ದಿನಗಳ ಬೇಡಿಕೆಯನ್ನು ಈಡೇರಿಸಬಹುದಾಗಿದೆ. ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಭಾರೀ ಇಳಿಕೆ – ಭಾರತ ಅಮೆರಿಕದಿಂದ ತೈಲ ಖರೀದಿಸುತ್ತಿಲ್ಲ ಯಾಕೆ?
ಭಾರತದ ತೈಲ ಸಂಗ್ರಹ ಏನೇನು ಸಾಲದು. ಒಟ್ಟು 90 ದಿನಗಳ ಬಳಕೆಗೆ ಆಗುವಷ್ಟು 13.32 ಮೆಟ್ರಿಕ್ ಟನ್ ತೈಲ ಸಂಗ್ರಹ ಅಗತ್ಯತೆ ಭಾರತಕ್ಕಿದೆ. ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐಎಸ್ಪಿಆರ್ ಎಲ್) ಮಂಗಳೂರು, ಉಡುಪಿ ಬಳಿಯ ಪಾದೂರು, ವಿಶಾಖಪಟ್ಟಣಂನಲ್ಲಿ ಭೂಗತ ತೈಲ ಸಂಗ್ರಹಣ ಘಟಕಗಳನ್ನು ಸ್ಥಾಪಿಸಿದೆ.
ಮೂರು ತೈಲ ಸಂಗ್ರಹಗಾರಗಳ ಪೈಕಿ ಪಾದೂರಿನಲ್ಲಿ ಅತಿ ಹೆಚ್ಚು ತೈಲವನ್ನು ಸಂಗ್ರಹ ಮಾಡಬಹುದಾಗಿದೆ. ಪಾದೂರಿನಲ್ಲಿ 2.5 ದಶಲಕ್ಷ ಟನ್(17 ದಶಲಕ್ಷ ಬ್ಯಾರೆಲ್), ಮಂಗಳೂರಿನಲ್ಲಿ 1.5 ದಶಲಕ್ಷ ಟನ್, ವಿಶಾಖಪಟ್ಟಣದಲ್ಲಿ 1.33 ಟನ್ ತೈಲವನ್ನು ಸಂಗ್ರಹಿಸಬಹುದಾಗಿದೆ.
ಶೇ.83ರಷ್ಟು ತೈಲವನ್ನು ಭಾರತ ಆಮದು ಮಾಡುತ್ತಿದೆ. 65 ದಿನಗಳಿಗೆ ಆಗುವಷ್ಟು ತೈಲವನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ರಿಫೈನರಿಗಳಿಗೆ ಇದೆ. 90 ದಿನಗಳ ಬಳಕೆಗೆ ಆಗುವಷ್ಟು ತೈಲ ಸಂಗ್ರಹಿಸುವ ನಿಟ್ಟಿನಲ್ಲಿ ಐಎಸ್ಪಿಆರ್ಎಲ್ ಒಡಿಶಾದ ಚಂಡಿಕೋಲ್, ರಾಜಸ್ಥಾನದ ಬಿಕಾನೆರ್, ಗುಜರಾತಿನ ರಾಜ್ಕೋಟ್ ಬಳಿ ಭೂಗತ ತೈಲಗಾರ ನಿರ್ಮಿಸಲು ಮುಂದಾಗುತ್ತಿದೆ.