ಗಾಂಧಿನಗರ: ಗುಜರಾತ್ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಸಂಭವಿಸಿದ ಬೆಂಕಿ ಅವಘಡದಿಂದ 17 ಕೋವಿಡ್-19 ರೋಗಿಗಳು ಸೇರಿದಂತೆ 23 ಮಂದಿಯನ್ನು ರಕ್ಷಿಸಲಾಗಿದೆ.
ಘಟನೆ ಕುರಿತಂತೆ ವಡೋದರಾದ ಜಿಲ್ಲಾಧಿಕಾರಿ ಶಾಲಿನಿ ಅಗರ್ವಾಲ್, ನಗರದ ಮಾಂಡ್ವಿ ಪ್ರದೇಶದ ಶ್ರೀ ವಿಜಯ್ ವಲ್ಲಭ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಯಾರೂ ಹಾನಿಗೊಂಡಿಲ್ಲ. ಕೋವಿಡ್-19 ರೋಗಿಗಳನ್ನು ಸೇರಿಸಿದಂತೆ ಎಲ್ಲ 23 ರೋಗಿಗಳನ್ನು ರಕ್ಷಿಸಿ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬೆಳಗ್ಗೆ 9:05ಕ್ಕೆ ಘಟನೆ ಕುರಿತಂತೆ ಕರೆ ಬಂದಿದ್ದು, ನಾಲ್ಕು ಅಂತಸ್ತಿನ ಆಸ್ಪತ್ರೆಯ, ಮೊದಲನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಹಾಗೂ ಎರಡನೇ, ಮೂರನೇ ಮಹಡಿಯವರೆಗೂ ಹೊಗೆ ಆವರಿಸಿಕೊಂಡಿದೆ. ಅಲ್ಲದೆ ಸುಮಾರು ಒಂದು ಗಂಟೆಗಳ ಬಳಿಕ ಬೆಂಕಿ ನಿಯಂತ್ರಣಕ್ಕೆ ತರಲಾಗಿದ್ದು, ಹೊಗೆ ಮೇಲಿನ ಮಹಡಿಯವರೆಗೂ ಆವರಿಸಿಕೊಂಡಿದ್ದರಿಂದ ಎಲ್ಲಾ 23 ರೋಗಿಗಳನ್ನು ಇತರೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಆಸ್ಪತ್ರೆಯಲ್ಲಿ ಕೇವಲ ಒಂದು ಅಂತಸ್ತಿನ ಮೆಟ್ಟಿಲುಗಳಿರುವುದರಿಂದ, ಕಿಟಕಿ ಬಳಿ 3-4 ಏಣಿಗಳನ್ನು ಬಳಸಿ ರೋಗಿಗಳನ್ನು ಸ್ಥಳಾಂತರಿಸಲಾಯಿತು ಎಂದು ಅಗ್ನಿ ಶಾಮಕದಳ ಅಧಿಕಾರಿ ಅಮಿತ್ ಚೌಧರಿ ಹೇಳಿದ್ದಾರೆ.