ಶಿವಮೊಗ್ಗ: ಕೊರೊನಾ ವೈರಸ್ ಭೀತಿ ಹಾಗೂ ಲಾಕ್ಡೌನ್ ಪರಿಣಾಮ ಶುಭ ಸಮಾರಂಭಗಳಿಗೆ ಹೆಚ್ಚು ಜನ ಸೇರುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿದೆ. ಅಲ್ಲದೇ ಹೊರ ಜಿಲ್ಲೆಗಳಿಗೂ ಬಸ್ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿಯೇ ಹೆತ್ತ ಮಗನ ಮದುವೆಗೂ ಪೋಷಕರು ಹೋಗದಂತಹ ಸ್ಥಿತಿ ನಿರ್ಮಾಣವಾಗಿ, ಆನ್ಲೈನ್ನಲ್ಲಿಯೇ ಮಗನ ಮದುವೆಯನ್ನು ವೀಕ್ಷಿಸಿ, ಹೆತ್ತವರು ಆಶೀರ್ವಾದ ಮಾಡಿದ್ದಾರೆ.
ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಮದ ಜಯಲಕ್ಷ್ಮಿ ಹಾಗೂ ಲಕ್ಷ್ಮಿನಾರಾಯಣ ದಂಪತಿಯ ಪುತ್ರ ಶಿವಶ್ಚಂದ್ರ ಹಾಗೂ ಬೆಂಗಳೂರಿನ ಶೈಲಜಾ ಹಾಗೂ ಚಂದ್ರಶೇಖರ್ ದಂಪತಿ ಪುತ್ರಿ ಕಾವ್ಯ ಅವರ ಮದುವೆ ಇಂದು ಬೆಂಗಳೂರಿನಲ್ಲಿ ನಡೆಯಿತು. ಆದರೆ ಕೊರೊನಾ ಭೀತಿ ಹಿನ್ನೆಲೆ ಮದುವೆಗೆ ಹೋಗಲಾದೇ ಪೋಷಕರು ತಮ್ಮ ಮಗನ ಮದುವೆಯನ್ನು ಆನ್ಲೈನ್ನಲ್ಲಿ ವೀಕ್ಷಣೆ ಮಾಡಿ, ಮನೆಯಿಂದಲೇ ಆಶೀರ್ವಾದ ಮಾಡಿದ್ದಾರೆ.
ಕೊರೊನಾ ಭೀತಿಗೆ ಶಿವಶ್ವಂದ್ರ ಪೋಷಕರು ಬೆಂಗಳೂರಿಗೆ ಹೋಗಲು ಆಗಲಿಲ್ಲ. ಇದರಿಂದ ಶಿವಶ್ಚಂದ್ರ ಪೋಷಕರು ಕೋಡೂರಿನ ಮನೆಯಲ್ಲೇ ಕುಳಿತು ವಾಟ್ಸಪ್ ವಿಡಿಯೋವನ್ನು ಟಿವಿಗೆ ಕನೆಕ್ಟ್ ಮಾಡಿಕೊಂಡು ಮಗನ ಮದುವೆ ನೋಡಿ ಒಂದೆಡೆ ಖುಷಿಪಟ್ಟರೇ, ಮತ್ತೊಂದೆಡೆ ಹೆತ್ತ ಮಗನ ಮದುವೆಯಲ್ಲಿ ಭಾಗವಹಿಸಿ ಮಗ ಸೊಸೆಗೆ ಆಶೀರ್ವದಿಸಲು ಆಗಲಿಲ್ಲವಲ್ಲ ಎಂಬ ನೋವು ಪಟ್ಟಿದ್ದಾರೆ.