ಮಂಡ್ಯ: ನಮ್ಮೂರಿಗೆ ಕೊರೊನಾ ಮಹಾಮಾರಿ ಬರಬಾರದು ಎಂದು ಊರಿನ ಗ್ರಾಮಸ್ಥರು ಗ್ರಾಮದಲ್ಲಿ ಕೋಳಿ ಹಾಗೂ ಕುರಿಯನ್ನು ಬಲಿ ಕೊಟ್ಟು ಪೂಜೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ರಾಮಂದೂರು ಗ್ರಾಮದಲ್ಲಿ ಜರುಗಿದೆ.
ಸದ್ಯ ರಾಮಂದೂರು ಗ್ರಾಮದಲ್ಲಿ ಮೂರು ಕೊರೊನಾ ಕೇಸ್ಗಳಿದ್ದು, ಮುಂದಿನ ದಿನಗಳಲ್ಲಿ ನಮ್ಮೂರಿನಲ್ಲಿ ಕೊರೊನಾ ಹೆಚ್ಚಬಾರದು ಎಂದು, ಊರಿನ ಗ್ರಾಮಸ್ಥರು ಬಲಿ ಹಾಗೂ ಪೂಜೆಯನ್ನು ಮಾಡಿದ್ದಾರೆ.
ಊರಿನ ಹೊರ ವಲಯದ ನಾಲ್ಕು ಕಡೆ ಬೇವಿನ ಸೊಪ್ಪು ಹಾಗೂ ಹೊಂಗೆ ಸೊಪ್ಪಿನಲ್ಲಿ ಚಪ್ಪರ ಹಾಕಿ ಅದರ ಒಳಗೆ ಕಲ್ಲನ್ನು ಇಟ್ಟು ಕೊರೊನಾ ಮಾರಿಯಮ್ಮ ಎಂದು ಪೂಜೆ ಮಾಡಿದ್ದಾರೆ. ನಂತರ ಕೋಳಿ ಹಾಗೂ ಕುರಿಯನ್ನು ಬಲಿ ಕೊಟ್ಟಿದ್ದಾರೆ. ಈ ಮೂಲಕ ನಮ್ಮೂರಿಗೆ ಕೊರೊನಾ ಮಾರಿ ಹೆಚ್ಚಾಗಬಾರದು ಎಂದು ಪ್ರಾರ್ಥನೆ ಮಾಡಿದ್ದಾರೆ.