ಹುಬ್ಬಳ್ಳಿ: ಆಕ್ಸಿಜನ್ ಕೊರತೆಯಿಂದ ಹಲವಡೆ ಕೋವಿಡ್ ಸೋಂಕಿತರು ಮೃತಪಡುತ್ತಿರುವ ಘಟನೆಗಳು ನಡೆದಿವೆ. ಇದರ ಬೆನ್ನಲ್ಲೇ ನಗರದ ಕಿಮ್ಸ್ ನಲ್ಲಿ ಆಕ್ಸಿಜನ್ ಹೊತ್ತ ಟ್ಯಾಂಕರ್ವೊಂದು ನಾಲ್ಕು ದಿನ ನಿಂತು ಮರಳಿ ಹೋದ ಘಟನೆ ನಡೆದಿದೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇದನ್ನು ತಳ್ಳಿಹಾಕಿರುವ ಕಿಮ್ಸ್ ಆಡಳಿತ ಮಂಡಳಿ 3 ದಿನದ ಹಿಂದೆಯೇ ಟ್ಯಾಂಕರ್ ಬಂದಿತ್ತು. ಆದರೆ ಕಿಮ್ಸ್ ನಲ್ಲಿ ಆಕ್ಸಿಜನ್ ಸ್ಟಾಕ್ ಇದ್ದ ಕಾರಣ ಅದನ್ನು ಅನ್ಲೋಡ್ ಮಾಡಿರಲಿಲ್ಲ ಅಷ್ಟೇ ಎಂದು ಸ್ಪಷ್ಟಪಡಿಸಿದೆ.
ಆಗಿದ್ದೇನು?
ಮಧ್ಯಪ್ರದೇಶದಿಂದ ಆಕ್ಸಿಜನ್ ಹೊತ್ತ ಟ್ಯಾಂಕರ್ ಕಳೆದ 4 ದಿನದ ಹಿಂದೆಯೇ ಬಂದು, ಕಿಮ್ಸ್ ಆವರಣದಲ್ಲಿ ನಿಂತಿತ್ತು. ಚಾಲಕನಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಯಾರನ್ನು ಕಾಣಬೇಕು. ಯಾರನ್ನು ಭೇಟಿಯಾಗಬೇಕು ಎಂಬುದು ತಿಳಿಯದೇ ಟ್ಯಾಂಕರ್ ನಿಲ್ಲಿಸಿಕೊಂಡು ಅಲ್ಲೇ ನಿಂತಿದ್ದರು. ಕೊನೆಗೆ 3 ದಿನದ ಬಳಿಕ ಟ್ಯಾಂಕರ್ ಮರಳಿ ಏಕೆ ಬಂದಿಲ್ಲ ಎಂದು ಮಧ್ಯಪ್ರದೇಶದಿಂದ ಟ್ಯಾಂಕರ್ ಮಾಲೀಕರು ಚಾಲಕನಿಗೆ ಕರೆ ಮಾಡಿ ಕೇಳಿದ್ದಾರೆ. ಆದರೆ ಆತ ಇಲ್ಲೇ ಕಿಮ್ಸ್ ನಲ್ಲಿದ್ದೇನೆ. ಆಕ್ಸಿಜನ್ ಅನ್ಲೋಡ್ ಮಾಡುವ ಬಗ್ಗೆ ಯಾರೂ ಹೇಳುತ್ತಲೇ ಇಲ್ಲ. ಯಾರೂ ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ. ಆಗ ಮಾಲೀಕರು, ಕಿಮ್ಸ್ ವೈದ್ಯರನ್ನು ಭೇಟಿಯಾಗು ಎಂದು ಸಲಹೆ ನೀಡಿದ್ದಾರೆ. ಅದರಂತೆ ಚಾಲಕ ವೈದ್ಯರನ್ನು ಭೇಟಿಯಾಗಿ ತಾನು ಆಕ್ಸಿಜನ್ ಟ್ಯಾಂಕರ್ ತಂದಿರುವ ವಿಷಯ ತಿಳಿಸಿದ್ದಾರೆ.
ವೈದ್ಯರು ನಮ್ಮಲ್ಲಿ ಜಾಗವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಆಕ್ಸಿಜನ್ ಅನ್ಲೋಡ್ ಮಾಡಿಸಲು ಬೆಳಗಾವಿಗೆ ಕಳುಹಿಸಿದ್ದಾರೆ. ಅದರಂತೆ ಗುರುವಾರ ಸಂಜೆ ಆಕ್ಸಿಜನ್ ಟ್ಯಾಂಕರ್ ನ್ನು ಬೆಳಗಾವಿಗೆ ಕೊಂಡೊಯ್ದಿದ್ದಾರೆ. ಈ ಕುರಿತು ಸಾರ್ವಜನಿಕರೊಬ್ಬರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ, ಈ ವಿಡಿಯೋ ಇದೀಗ ವೈರಲ್ ಆಗಿದೆ. ಆಕ್ಸಿಜನ್ ಟ್ಯಾಂಕರ್ ಬಂದರೂ ಅನ್ಲೋಡ್ ಮಾಡಿಕೊಳ್ಳದ ಕಿಮ್ಸ್ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಬೇರೆ ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಎಷ್ಟೋ ಜನ ಸಾವಿಗೀಡಾಗುತ್ತಿದ್ದಾರೆ. ಮೂರು, ನಾಲ್ಕು ದಿನ ಆಕ್ಸಿಜನ್ ಟ್ಯಾಂಕರ್ ಅನ್ಲೋಡ್ ಮಾಡಿಕೊಳ್ಳದೇ ಹಾಗೆ ಇಟ್ಟುಕೊಂಡಿದ್ದಕ್ಕೆ ಸಾರ್ವಜಕನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಪ ತಳ್ಳಿಹಾಕಿದ ಕಿಮ್ಸ್
ಸಾರ್ವಜನಿಕರ ಈ ಆರೋಪವನ್ನು ತಳ್ಳಿ ಹಾಕಿರುವ ಕಿಮ್ಸ್ ನ ಅಧೀಕ್ಷಕ ಡಾ.ಅರುಣ್ ಕುಮಾರ್, ಟ್ಯಾಂಕರ್ ಬಂದಿರುವ ವಿಷಯ ಗೊತ್ತಾಗಿಲ್ಲ ಎನ್ನಲು ಅದೇನು ಸಣ್ಣ ವಸ್ತುವೇ? ಬೃಹದಾಕಾರದ ಟ್ಯಾಂಕರ್ ಎಲ್ಲರ ಕಣ್ಣಿಗೆ ಕಾಣುವಂತೆ ನಿಂತಿತ್ತು. 4 ದಿನದ ಹಿಂದೆ ಬಂದಿರುವುದು ನಿಜ, ಆದರೆ ಆಗ ಕಿಮ್ಸ್ ನಲ್ಲಿ ಆಕ್ಸಿಜನ್ ಸ್ಟಾಕ್ ಇತ್ತು. ಹೀಗಾಗಿ ಅನ್ಲೋಡ್ ಮಾಡಿರಲಿಲ್ಲ, ಈಗಲೂ ಆಕ್ಸಿಜನ್ ಸ್ಟಾಕ್ ಇದೆ. ಹೀಗಾಗಿ ಆ ಟ್ಯಾಂಕರ್ನ್ನು ಬೇರೆಡೆ ಕಳುಹಿಸಲಾಗಿದೆ ಅಷ್ಟೇ. ಟ್ಯಾಂಕರ್ ಬಂದಿರುವುದೇ ಗೊತ್ತಾಗಿಲ್ಲ ಎಂಬುದು ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.