– ಹೊರ ಜಿಲ್ಲೆ, ರಾಜ್ಯದವರಿಗೆ ಕೊರೊನಾ ಪರೀಕ್ಷೆ
– ಸರ್ಟಿಫಿಕೇಟ್ ತಂದ್ರೆ ಮಾತ್ರ ಕ್ಷೇತ್ರಕ್ಕೆ ಬರಲು ಅವಕಾಶ
ಮಡಿಕೇರಿ: ಇದೇ ಅಕ್ಟೋಬರ್ 17 ರಂದು ಪವಿತ್ರ ಕಾವೇರಿ ತೀರ್ಥೋದ್ಭವ ನಡೆಯಲಿದೆ. ಹೀಗಾಗಿ ಕಾವೇರಿ ಪವಿತ್ರ ತೀರ್ಥೊದ್ಬವ ವೀಕ್ಷಿಸಲು ಹೊರ ಜಿಲ್ಲೆ ಮತ್ತು ರಾಜ್ಯದಿಂದ ಬರುವ ಭಕ್ತದಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ. ಭಕ್ತರು ಕೋವಿಡ್ ಪರೀಕ್ಷೆ ಮಾಡಿಸಿ ಸರ್ಟಿಫಿಕೇಟ್ ತಂದರೆ ಮಾತ್ರ ಕ್ಷೇತ್ರಕ್ಕೆ ಬರಲು ಅವಕಾಶ ಎಂದು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಕಾವೇರಿ ತೀರ್ಥೋದ್ಭವಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ. ಸ್ಥಳೀಯರು ತೀರ್ಥೋದ್ಭವ ಸಂದರ್ಭ ಆದಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ವಯಂನಿಯಂತ್ರಣ ಮಾಡಿಕೊಂಡು ಕಾವೇರಿ ದರ್ಶನ ಮಾಡಬೇಕು. ಅಷ್ಟೇ ಅಲ್ಲದೆ ಈ ಬಾರಿ ಹೆಚ್ಚು ಜನದಟ್ಟಣೆಗೆ ಅವಕಾಶವಿಲ್ಲದಂತೆ ತೀರ್ಥೋದ್ಭವಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.
ಪೂಜಾ ವಿಧಿವಿಧಾನಗಳು, ಕಾವೇರಿ ಕ್ಷೇತ್ರದ ಸಂಪ್ರದಾಯಗಳಿಗೆ ಕಿಂಚಿತ್ತೂ ಚ್ಯುತಿಬಾರದಂತೆ ತೀರ್ಥೋದ್ಭವ ಸಂದರ್ಭದಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಕೈಗೊಳ್ಳಲಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಭಕ್ತಾಧಿಗಳ ಆರೋಗ್ಯ, ಹಿತರಕ್ಷಣೆಗೂ ಆದ್ಯತೆ ನೀಡಲಾಗುತ್ತದೆ ಎಂದರು.
ಕಾವೇರಿ ಕ್ಷೇತ್ರಕ್ಕೆ ಬಂದವರಿಂದ ಕೊರೊನಾ ಸೋಂಕು ವ್ಯಾಪಿಸದಂತೆ ಹಾಗೂ ಯಾವುದೇ ಸಮಸ್ಯೆಗೆ ಕಾರಣವಾಗದಂತೆ ಕ್ಷೇತ್ರದಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಈ ಬಾರಿ ಜಿಲ್ಲಾಡಳಿತ ಹಾಗೂ ದೇವಾಲಯ ಸಮಿತಿ ವತಿಯಿಂದ ಕೈಗೊಳ್ಳಲಿದೆ. ಜನರು ಕೂಡ ಸಹಕಾರ ನೀಡುವಂತೆ ಶಾಸಕ ಬೋಪಯ್ಯ ಮನವಿ ಮಾಡಿಕೊಂದರು.