ಬೆಂಗಳೂರು: ಕೊರೊನಾ ಸೋಂಕಿತರಿಗೆ ನೀಡಲಾಗುತ್ತಿರುವ ರೆಮ್ಡಿಸಿವರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಪ್ರತಿಷ್ಟಿತ ಹರ್ಷ ರಾಮಯ್ಯ ಆಸ್ಪತ್ರೆ ಮಾಲೀಕ ಶಿವಕುಮಾರ್ ಆರೋಪ ಮಾಡಿದ್ದಾರೆ.
ರಾಷ್ಟ್ರಾದ್ಯಂತ ಕೋವಿಡ್ -19 ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ಜನರು ಬಳಲುತ್ತಿದ್ದಾರೆ ಮತ್ತು ವೈರಸ್ ಹರಡುವುದನ್ನು ತಡೆಯಲು ಸರ್ಕಾರ ಸಹ ಪ್ರಮುಖ ಕ್ರಮಗಳನ್ನು ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ. ಪೊಲೀಸರು ಮತ್ತು ಇತರ ಅನೇಕ ಸಂಬಂಧಿತ ಅಧಿಕಾರಿಗಳು ಸರ್ಕಾರದೊಂದಿಗೆ ವೈರಸ್ ನಿಯಂತ್ರಣಕ್ಕಾಗಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.
ಈ ಮಧ್ಯೆ ಸಿ, ಎಫ್ ಮತ್ತು ಸಗಟು ವಿತರಕರು ಬ್ಯಾಚ್ ನಂ ಆರ್ ಎಂ121004ಎ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದು, ರೆಮ್ ಡಿಸಿವರ್ ಅನ್ನು ಸರಬರಾಜು ಮಾಡುತ್ತಿಲ್ಲ ಎಂದು ನೆಲಮಂಗಲ ನಗರದ ಪ್ರತಿಷ್ಟಿತ ಹರ್ಷ ರಾಮಯ್ಯ ಆಸ್ಪತ್ರೆ ಮಾಲೀಕ ಶಿವಕುಮಾರ್ ಆರೋಪ ಮಾಡಿದ್ದಾರೆ.
ಕಳೆದ 10 ದಿನಗಳಿಂದ ಚುಚ್ಚುಮದ್ದಿನ ಬಗ್ಗೆ ವಿಚಾರಿಸಿದಾಗ, ಅವರು ಯಾವುದೇ ಸ್ಟಾಕ್ ಇಲ್ಲದೆ ಉತ್ತರಿಸುತ್ತಿದ್ದಾರೆ. ಸಿ&ಎಫ್ ವಿತರಕರು ಸರಿಯಾಗಿ ವಿತರಣೆ ಮಾಡುತ್ತಿಲ್ಲ. 1500 ರಿಂದ 2000 ಸಾವಿರಕ್ಕೆ ಸಿಗುವ ಔಷಧಿಯನ್ನು ಕಾಳ ಸಂತೆಯಲ್ಲಿ 15 ರಿಂದ 25 ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ. ಈ ಕುರಿತಂತೆ ಕೂಡಲೇ ಕ್ರಮ ವಹಿಸುವಂತೆ ಮಾನ್ಯ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಪೊಲೀಸ್ ಕಮಿಷನರ್ ಸೇರಿದಂತೆ ಅನೇಕರಿಗೆ ಶಿವಕುಮಾರ್ರವರು ಪತ್ರ ಬರೆದು ಕೂಡಲೇ ಈ ಪ್ರಕರಣವನ್ನು ಸಿಬಿಐ, ಸಿಸಿಬಿ, ಸಿಐಡಿಗೆ ಹಸ್ತಾಂತರ ಮಾಡಿ ಕರ್ನಾಟಕದಲ್ಲಿ ಸ್ಟಾಕ್ ಲಭ್ಯವಿರುವಂತೆ ಮನವಿ ಮಾಡಿಕೊಂಡಿದ್ದಾರೆ.