– ಇನ್ನೂ ನಾಲ್ಕು ಚಿರತೆಗಳಿವೆ ಎಂದ ಗ್ರಾಮಸ್ಥರು
ಹಾಸನ: ಕೇವಲ ಒಂದು ತಿಂಗಳಲ್ಲಿ ಕರು, ಮೇಕೆ, ನಾಯಿಯನ್ನು ತಿಂದು ಭೀತಿ ಹುಟ್ಟಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಸೆರೆ ಹಿಡಿದಿದ್ದಾರೆ.
ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ, ದಿಂಡಗೂರು ಗ್ರಾಮದ ಹೊರವಲಯದಲ್ಲಿ ಚಿರತೆಯನ್ನು ಸೆರೆ ಹಿಡಿಯಲಾಗಿದ್ದು, ಚಿಕ್ಕೇನಹಳ್ಳಿ ಗ್ರಾಮದ ರೈತ ಪ್ರಭು ಅವರ ಜಮೀನಿನಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಕಳೆದ ಒಂದು ತಿಂಗಳಿಂದ ಮೂರು ಕರು, ಎರಡು ಮೇಕೆ, ಒಂದು ನಾಯಿಯನ್ನು ತಿಂದು ಚಿರತೆ ಭೀತಿ ಮೂಡಿಸಿತ್ತು. ಐದು ದಿನಗಳ ಹಿಂದೆ ಚಿರತೆ ಸೆರೆಗೆ ಬೋನ್ ಇಡಲಾಗಿತ್ತು. ಸೋಮವಾರ ರಾತ್ರಿ ಚಿರತೆ ಬೋನಿಗೆ ಬಿದ್ದಿದೆ.
ಚಿರತೆಯನ್ನು ವಶಕ್ಕೆ ಪಡೆಯಲು ಬಂದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಭಾಗದಲ್ಲಿ ಇನ್ನೂ ನಾಲ್ಕು ಚಿರತೆಗಳು ಓಡಾಡಿಕೊಂಡು ಭೀತಿ ಮೂಡಿಸಿವೆ. ಅವುಗಳನ್ನೂ ಹಿಡಿದು ನಂತರ ಈ ಚಿರತೆ ಕೊಂಡೊಯ್ಯಿರಿ ಎಂದು ಆಕ್ರೋಶಗೊಂಡರು. ಬಳಿಕ ಎಲ್ಲ ಚಿರತೆ ಹಿಡಿಯುವ ಭರವಸೆ ನೀಡಿ, ಅರಣ್ಯಾಧಿಕಾರಿಗಳು ಚಿರತೆ ತೆಗೆದುಕೊಂಡು ಹೋದರು.