ಮೈಸೂರು: ಕ್ಷುಲ್ಲಕ ಕಾರಣಕ್ಕೆ ಗ್ರಾಮಕ್ಕೆ ನುಗ್ಗಿ ಗುಂಡು ಹಾರಿಸಿದ 7 ಮಂದಿ ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬಿಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರು ಮೂಲದ ಎಂ.ಮಧುಗೌಡ ಮತ್ತು ಈತನ ಸಹಚರರಿಂದ ಕೃತ್ಯ ನಡೆದಿರುವ ಆರೋಪ ಬಿಲ್ಲಹಳ್ಳಿ ಗ್ರಾಮದಲ್ಲಿ ಕೇಳಿಬಂದಿದೆ. ಸಿನಿಮೀಯ ರೀತಿಯಲ್ಲಿ ಗ್ರಾಮಕ್ಕೆ ನುಗ್ಗಿ ಗಲಾಟೆ ಮಾಡಿ ಗುಂಡು ಹಾರಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?
ಬಿಲ್ಲಹಳ್ಳಿ ಗ್ರಾಮದ ಗುರುಲಿಂಗಪ್ಪ ಮತ್ತು ಚನ್ನಬಸವಪ್ಪ ಕುಟುಂಬದ ನಡುವೆ ಮನೆಯ ಗಲ್ಲಿ ವಿಚಾರಕ್ಕೆ ಆಗಾಗ ಗಲಾಟೆಯಾಗುತಿತ್ತು. ಈ ಬಗ್ಗೆ ಸಾಕಷ್ಟು ನ್ಯಾಯ ಪಂಚಾಯ್ತಿ ನಡೆಸಿದರೂ ಸಮಸ್ಯೆ ಬಗೆಹರಿದಿರಲಿಲ್ಲ. ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಚನ್ನಬಸವಪ್ಪನ ಮೊಮ್ಮಗಳ ಪತಿ ಸುನಿಲ್ ಕುಮಾರ್ ಜೊತೆ ಮಧು ಗೌಡ ಮತ್ತು ಸ್ನೇಹಿತರನ್ನು ಗ್ರಾಮಕ್ಕೆ ಕರೆತಂದು ಗುರುಲಿಂಗಪ್ಪ ಕುಟುಂಬದೊಂದಿಗೆ ಗಲಾಟೆ ಮಾಡಿಸಿದ್ದಾರೆ. ಇದನ್ನು ಪ್ರಶ್ನೆ ಮಾಡಲು ಬಂದಿರುವ ಗ್ರಾಮಸ್ಥರನ್ನು ಬೆದರಿಸಲು ಮಧು ಗೌಡ ಹಾಗೂ ಸಹಚರರು ಗುಂಡು ಹಾರಿಸಿದ್ದಾರೆ. ತಕ್ಷಣ ಗ್ರಾಮಸ್ಥರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಈ ಸಂಬಂಧ 7 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಆರೋಪಿಗಳು ಯಾರು?
ಬಿಲ್ಲಹಳ್ಳಿ ಗ್ರಾಮದ ಬಿ.ಎಂ.ಚನ್ನಬಸಪ್ಪ, ಈತನ ಮೊಮ್ಮಗಳ ಪತಿ ಬಿ.ಎನ್ ಸುನಿಲ್ಕುಮಾರ್, ಬೆಂಗಳೂರಿನ ಎಂ. ಮಧು ಗೌಡ, ಯಾಸೀನ್, ಎಂ. ಪುನೀತ್ ಕುಮಾರ್, ಸಚಿನ್, ಬಿ.ಡಿ ಪುನೀತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಯಲ್ಲಿದ್ದ ಗನ್ಮ್ಯಾನ್ ಇತರರು ಪರಾರಿಯಾಗಿದ್ದಾರೆ. ಬಂಧಿತರಿಂದ 11 ಸಜೀವ ಗುಂಡು 2 ಖಾಲಿ ಗುಂಡು 2 ಫಾರ್ಚೂನರ್ ಕಾರು, ಮಹೇಂದ್ರ ಸ್ಕಾರ್ಪಿಯೋಗಳನ್ನು ವಶಕ್ಕೆ ಪಡೆಯಲಾಗಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.