ಬೆಂಗಳೂರು: ನಾಳೆಯಿಂದ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗುತ್ತಿದ್ದಂತೆ ಸಂಚಾರದಲ್ಲಿ ಸಮಸ್ಯೆಯಾಗಿದ್ದು, ಇವತ್ತೇ ಬಸ್ಗಳ ಕೊರತೆ ಶುರುವಾಗಿದೆ.
9 ಬೇಡಿಕೆಗಳಲ್ಲಿ ಒಂದು ಬೇಡಿಕೆ ಬಿಟ್ಟು ಎಲ್ಲಾ ಈಡೇರಿಸಿದ್ದೇವೆ. ಪ್ರತಿಭಟನೆಗೆ ಹೋಗಬಾರದು, ಮನವಿ ಮಾಡಿದ್ದೇವೆ. ಪ್ರತಿಭಟನೆಗೆ ಹೋದರೆ ಸಾರಿಗೆ ಇಲಾಖೆ ಬೇರೆ ವ್ಯವಸ್ಥೆ ಮಾಡಲಿದೆ ಎಂದು ಮುಖ್ಯ ಮಂತ್ರಿ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ. ಈ ಬೆನ್ನಲ್ಲೇ ನಾಳೆಯಿಂದ ನಡೆಯ ಬೇಕಾಗಿದ್ದ ಸಾರಿಗೆ ನೌಕಕರ ಮುಷ್ಕರ ಇಂದೇ ನಿಧಾನವಾಗಿ ಪ್ರಾರಂಭವಾಗಿದೆ.
ಮೆಜೆಸ್ಟಿಕ್ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಆಗಮಿಸುವ ಮತ್ತು ನಿರ್ಗಮಿಸುವ ಬಸ್ಗಳ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಬಸ್ಸ್ಟ್ಯಾಂಡ್ಗಳಲ್ಲಿ ಬಸ್ಗಳ ಕೊರತೆ ಶುರುವಾಗಿದೆ. ಸೆಕೆಂಡ್ ಶಿಫ್ಟ್ಗೆ ಬರಬೇಕಾಗಿದ್ದ ಸಿಬ್ಬಂದಿ ಗೈರಾಗಿದ್ದಾರೆ. ಹೀಗಾಗಿ ಬಸ್ ಕೊರತೆ ಉಂಟಾಗುತ್ತಿದೆ. ಆಗಮಿಸುವ ಮತ್ತು ನಿರ್ಗಮಿಸುವ ಬಸ್ಗಳ ಸಂಖ್ಯೆ ಕಡಿಮೆ ಇದೆ. ಲಭ್ಯವಿರುವ ವಾಹನಗಳ ಸೌಲಭ್ಯ ಬಳಸಿಕೊಳ್ಳುವಂತೆ ಮೈಕ್ನಲ್ಲಿ ಬಿಎಂಟಿಸಿ ಸಿಬ್ಬಂದಿಯಿಂದ ಅನೌನ್ಸ್ ಮಾಡುತ್ತಿದ್ದಾರೆ.
ಬಸ್ ಸಿಗದೇ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಸ್ ಕೊರತೆಯಿಂದಾಗಿ ನಿಲ್ದಾಣದಲ್ಲಿರುವ ಬಸ್ಗೆ ಜನರು ಮುಗಿಬಿದ್ದಿದ್ದಾರೆ. ಬಸ್ ಒಳಗೆ ಸ್ಟ್ಯಾಂಡಿಂಗ್ನಲ್ಲಿ ಪ್ರಯಾಣಿಕರು ನಿಂತಿದ್ದಾರೆ.